ಕೆ.ಆರ್.ಪೇಟೆ: ಗ್ರಾಮಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಗೆ ಒಳಪಡುವ ಗ್ರಾಮಕ್ಕೆ ₹ 1 ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ಶಾಸಕ ನಾರಾಯಣಗೌಡ ಹೇಳಿದರು.
ತಾಲ್ಲೂಕಿನ ಸಿಂಧುಘಟ್ಟ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ವಿಕಾಸ ಯೋಜನೆಯ ವಿಶೇಷ ಗ್ರಾಮ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಸುಮಾರು 400 ಗ್ರಾಮಗಳಿದ್ದು, ಈ ಪೈಕಿ ಬಂಡಿಹೊಳೆ, ಸಿಂಧುಘಟ್ಟ, ಆಲಂಬಾಡಿ, ಕಸಬಾ ಹೋಬಳಿಯ ಮಾರ್ಗೋನಹಳ್ಳಿ ಗ್ರಾಮಗಳು ಗ್ರಾಮ ವಿಕಾಸ ಯೋಜನೆ ಆಯ್ಕೆಯಾಗಿವೆ. ಪ್ರತಿ ಗ್ರಾಮಕ್ಕೆ ₹ 1 ಕೋಟಿ ಅನುದಾನ ಸಿಗಲಿದೆ ಎಂದರು.
ಗ್ರಾಮದೊಳಗೆ ಸಿಮೆಂಟ್ ರಸ್ತೆಗಳು, ಕಲ್ಲುಚಪ್ಪಡಿ ರಸ್ತೆಗಳು ಹಾಗೂ ಹೈಟೆಕ್ ಚರಂಡಿ ನಿರ್ಮಾಣಕ್ಕೆ ₹ 50 ಲಕ್ಷ, ಗ್ರಂಥಾಲಯ, ಬಯಸಲು ರಂಗಮಂದಿರ ನಿರ್ಮಾಣಕ್ಕೆ ₹ 12 ಲಕ್ಷ, ಯುವಕರ ಸಂಘಗಳಿಗೆ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ, ದೇವಸ್ಥಾನಗಳು, ಚರ್ಚುಗಳು, ಮಸೀದಿಗಳ ಅಭಿವೃದ್ಧಿಗೆ ₹ 6 ಲಕ್ಷ, ಪಂಚಾಯಿತಿ ನಡವಳಿಗಳನ್ನು ಟಿವಿ ಮಾಧ್ಯಮ ಪ್ರಸಾರ ಮೂಲ ಸೌಕರ್ಯಕ್ಕೆ ₹ 2 ಲಕ್ಷ, ಹಾಗೂ ಇನ್ನಿತರ ಅಭಿವೃದ್ಧಿಗೆ ₹ 5 ಲಕ್ಷ ಬಳಕೆ ಮಾಡಲು ಅವಕಾಶವಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಟಿ.ಮಂಜು ಪ್ರಾಸ್ತಾವಿಕ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಂಬರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ವಿಜಯಕುಮಾರ್. ಸದಸ್ಯ ಖಲೀಲ್ ಬಾಬು ಗ್ರಾಮ ಪಂಚಾಯಿತಿ ಸದಸ್ಯರುಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.