ADVERTISEMENT

ಚಾಂಷುಗರ್ಸ್‌: ಕಬ್ಬಿನ ಬಾಕಿ ಹಣ ಪಾವತಿಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 10:20 IST
Last Updated 23 ಫೆಬ್ರುವರಿ 2012, 10:20 IST

ಮದ್ದೂರು: ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯು ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ 19 ಕೋಟಿ ರೂಪಾಯಿ ಹಣವನ್ನು ಮಾರ್ಚ್ 15 ರೊಳಗಾಗಿ ಪಾವತಿಸಲು ಹಾಗೂ 100 ರೂಪಾಯಿ ಮುಂಗಡ ಬಾಕಿ ಒಟ್ಟು 9 ಕೋಟಿ ರೂಪಾಯಿ ಹಣವನ್ನು ಏಪ್ರಿಲ್ ಅಂತ್ಯದ ವೇಳೆಗೆ ಪಾವತಿಸುವುದಾಗಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆ.ಎಂ.ದೊಡ್ಡಿ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತು.

ಶಾಸಕರಾದ ಬಿ.ರಾಮಕೃಷ್ಣ, ಕಲ್ಪನ ಸಿದ್ದರಾಜು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹಲವು ಸುತ್ತುಗಳ ಚರ್ಚೆ ಬಳಿಕ  ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಎಂ.ನಾಗರಾಜು ಹಾಗೂ ಉಪ ವ್ಯವಸ್ಥಾಪಕ ಮುರುಗನ್ ತಮ್ಮ ನಿರ್ಧಾರ ಪ್ರಕಟಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಬಿ.ರಾಮಕೃಷ್ಣ, ಚಾಂಷುಗರ್ ಆಡಳಿತ ಮಂಡಳಿಯು ಆರಂಭಿಸುತ್ತಿರುವ ರೈತಸಂಜೀವಿನಿ ಸಂಘದಡಿಯಲ್ಲಿ ಕಬ್ಬು ಪೂರೈಸಲು ಆಗಮಿಸುವ ರೈತರಿಗೆ ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ, ಆರೋಗ್ಯ ಕೇಂದ್ರ ಸ್ಥಾಪನೆ ಮಾಡಬೇಕು. ಅಲ್ಲದೇ ಯಾವುದೇ ಕಾರಣಕ್ಕೂ ಈ ಸಂಘದಲ್ಲಿ ರಾಜಕೀಯ ವ್ಯಕ್ತಿಗಳಿಗೆ ಸದಸ್ಯತ್ವ ನೀಡಬಾರದು ಎಂದು ವಿನಂತಿಸಿದರು.

ಜಿ.ಪಂ. ಸದಸ್ಯ ಕಂಠಿ ಸುರೇಶ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಅಜ್ಜಹಳ್ಳಿರಾಮಕೃಷ್ಣ, ಮುಖಂಡರಾದ ಕೆಂಗಲ್‌ಗೌಡ, ಮರಿಮಾದೇಗೌಡ, ಶಿವಲಿಂಗೇಗೌಡ, ಪ್ರಕಾಶ್, ಸಿದ್ದರಾಜು, ಮೆಣಸಗೆರೆ ರಾಜಣ್ಣ ಪಾಲ್ಗೊಂಡಿದ್ದರು.

ಕಟ್ಟಡ ನಿರ್ಮಾಣಕ್ಕೆ ಚಾಲನೆ
ಹೂತಗೆರೆ ಗ್ರಾಮದಲ್ಲಿ 27.40 ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಾಣ ಗೊಳ್ಳುತ್ತಿದ್ದು, ಮುಂದಿನ ಶೈಕ್ಷಣಿಕ ಸಾಲಿಗೆ ಹೊಸ ಕಟ್ಟಡದಲ್ಲಿ ಶಾಲೆ ಆರಂಭಗೊಳ್ಳುವುದು ನಿಶ್ಚಿತ ಎಂದು ಶಾಸಕಿ ಕಲ್ಪನ ಸಿದ್ದರಾಜು ಬುಧವಾರ ತಿಳಿಸಿದರು.

ಸಮೀಪದ ಹೂತಗೆರೆ ಗ್ರಾಮದಲ್ಲಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಶೇಷ ಅನುದಾನದಡಿಯಲ್ಲಿ ನಿರ್ಮಿಸಲಾಗುತ್ತಿರುವ ಈ ಕಟ್ಟಡದಲ್ಲಿ 5 ಕೊಠಡಿಗಳು, ಶೌಚಾಲಯ, ಕುಡಿಯುವ ನೀರು ಪೂರೈಕೆ ಸೇರಿದಂತೆ ಪೀಠೋಪಕರಣಗಳನ್ನು ಒದಗಿಸಲಾಗುತ್ತಿದ್ದು, ಉತ್ತಮ ಗುಣಮಟ್ಟದ ಕಾಮಗಾರಿ ನಡೆಯಲು ಗ್ರಾಮಸ್ಥರು ಅಗತ್ಯ ಸಹಕಾರ ನೀಡಬೇಕು ಎಂದು ವಿನಂತಿಸಿದರು.

ಶಾಸಕ ಬಿ.ರಾಮಕೃಷ್ಣ, ಜಿ.ಪಂ. ಸದಸ್ಯ ಕೆ.ರವಿ, ತಾ.ಪಂ. ಸದಸ್ಯ ಬಿಳಿಗೌಡ, ಎಸ್‌ಡಿಎಂಸಿ ಅಧ್ಯಕ್ಷ ಶ್ರೀಧರ್, ಸದಸ್ಯರಾದ ಜಯರಾಂ, ರಾಮಣ್ಣ, ಮರಿಯಪ್ಪ, ಪಾರ್ವತಮ್ಮ, ಸುಮಿತ್ರ, ಎ.ಎಲ್.ಕೃಷಣ, ಮುಖ್ಯಶಿಕ್ಷಕ ಶಿವರಾಮು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT