ADVERTISEMENT

ಚಿಕ್ಕರಸಿನಕೆರೆಯಲ್ಲಿ ಮನಸೂರೆಗೊಂಡ ‘ಜಾನಪದ ತತ್ವಪದ ಮೇಳ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 5:44 IST
Last Updated 22 ಡಿಸೆಂಬರ್ 2014, 5:44 IST

ಭಾರತೀನಗರ: ಸಮೀಪದ ಚಿಕ್ಕರಸಿನಕೆರೆ ಗ್ರಾಮದ ಶ್ರೀಕಾಲಭೈರವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಮಂಡ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಚಂದಗಾಲು ಗ್ರಾಮದ ರೇಣುಕಾಂಬ ಮಹಿಳಾ ಸಾಂಸ್ಕೃತಿಕ ಕಲಾ ತಂಡ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ‘ಜಾನಪದ ತತ್ವಪದ ಮೇಳ’ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿ  ಚಂದಗಾಲು ಸಿದ್ಧಮ್ಮ ಮತ್ತು ತಂಡದವರು ಹಲವು ತತ್ವಪದ ಹಾಡುಗಳ ಮೂಲಕ ನೆರೆದಿದ್ದವರ ಮನರಂಜಿಸಿದರು. ಅವರ ಹಾಡುಗಳ ತಾಳಕ್ಕೆ  ನೆರೆದಿದ್ದವರೂ ದನಿಗೂಡಿಸಿದ್ದು ವಿಶೇಷ. ಆರಕ್ಕೂ ಹೆಚ್ಚು ತತ್ವಪದ ತಂಡಗಳು ದಿನವಿಡೀ ತಮ್ಮ ತತ್ವಪದ ಗಾಯನದ ಮೂಲಕ ನೆರೆದಿದ್ದವರನ್ನು ಅಧ್ಯಾತ್ಮ ಲೋಕಕ್ಕೆ ಕರೆದೊಯ್ಯಿತು. ಕಾಗೆಹಳ್ಳದ ದೊಡ್ಡಿ ಕಸ್ತೂರಿ ಮಹಿಳಾ ಮಂಡಳಿಯ ಜಯಮ್ಮ ಮತ್ತು ತಂಡದವರು ಸಮಧುರ ರಂಗಗೀತೆಗಳ ಗಾಯನದ ಮೂಲಕ ಕೇಳುಗರನ್ನು ಆಕರ್ಷಿಸಿದರು.

ಇದೇ ಸಂದರ್ಭದಲ್ಲಿ ನಾಗಪುರದಲ್ಲಿ ನಡೆಯುವ ‘ರಾಷ್ಟ್ರೀಯ ಯುವ ಉತ್ಸವ’ದಲ್ಲಿ ಮಂಡ್ಯ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಪೂಜಾಕುಣಿತ ಕಲಾವಿದ ಚಿಕ್ಕರಸಿನಕೆರೆ ಚಿಕ್ಕಬೋರಯ್ಯ ಮತ್ತು ತಂಡದವರನ್ನು ಸನ್ಮಾನಿಸಲಾಯಿತು.

ಮೇಳಕ್ಕೂ ಮುನ್ನ ನಡೆದ ಕಾರ್ಯಕ್ರಮವನ್ನು ಜಾನಪದ ಅಕಾಡೆಮಿ ಸದಸ್ಯ ಗೊರವಾಲೆ ಚಂದ್ರಶೇಖರ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಜಾನಪದ ಕಲಾಪ್ರಕಾರಗಳಲ್ಲಿ ತತ್ವಪದ ವಿಶಿಷ್ಟವಾಗಿದೆ. ಗುರುಪರಂಪರೆಯ ಮೂಲಕ ಬಂದಿರುವ ಈ ಕಲೆಯನ್ನು ಉಳಿಸಬೇಕಾಗಿದೆ. ನಾಡಿನಾದ್ಯಂತ ತತ್ವಪದಕಾರರು ಇದ್ದಾರೆ. ಅವರನ್ನು ಒಂದುಗೂಡಿಸುವ ಕೆಲಸವಾಗಬೇಕಾಗಿದೆ. ಸಂಕಷ್ಟದಲ್ಲಿರುವ ತತ್ವಪದಕಾರರಿಗೆ ಆರ್ಥಿಕ ಸಹಾಯ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ತತ್ವಪದಕಾರರ ಸಮ್ಮೇಳನ ನಡೆಸಿ, ಅವರನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಯೋಜಿಸಲಾಗುತ್ತಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಅಣ್ಣೇಗೌಡ ಮಾತನಾಡಿದರು. ಜಾನಪದ ಕಲಾವಿದ ಕೀಲಾರ ಕೃಷ್ಣೇಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿವೃತ್ತ ಅಧಿಕಾರಿ ನಾಗೇಗೌಡ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೊರವಾಲೆ ರುದ್ರಪ್ಪ, ಹಿರಿಯ ರಂಗಕರ್ಮಿ ಚೀರನಹಳ್ಳಿ ಚೌಡಶೆಟ್ಟಿ, ಕಲಾವಿದ ಗೊರವಾಲೆ ಉಮಾಶಂಕರ್, ರೇಣುಕಾಂಬ ಮಹಿಳಾ ಸಾಂಸ್ಕೃತಿಕ ಕಲಾ ತಂಡದ ಪದಾಧಿಕಾರಿಗಳಾದ ಪ್ರಮೀಳಾ ರವಿಕುಮಾರ್, ಸುಧಾ ಸತ್ಯನಾರಾಯಣ, ಅಂಬಿಕಾ ಮುನಿರಾಜು, ವಿಕಸನ ಸಂಸ್ಥೆಯ ಬಿ.ಪಿ. ರಾಧಾಮಣಿ, ಕಡಿಲುವಾಗಿಲು ಮೀಸೆ ನಾಗರಾಜು, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.