ADVERTISEMENT

ಜಾನಪದಕ್ಕೆ ಕುತ್ತು: ವಿಷಾದ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 10:35 IST
Last Updated 2 ಜೂನ್ 2011, 10:35 IST

ಶ್ರೀರಂಗಪಟ್ಟಣ: ಆಧುನಿಕತೆಯ ಭರಾಟೆಯಲ್ಲಿ ಜನಪದ ಕಲೆ, ಸಂಗೀತಗಳ ಅಸ್ತಿತ್ವಕ್ಕೆ ಕುತ್ತು ಬಂದಿದೆ ಎಂದು ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ ವಿಷಾದಿಸಿದರು.ತಾಲ್ಲೂಕಿನ ನೆಲಮನೆಯಲ್ಲಿ ಸೋಮವಾರ ರಾತ್ರಿ ಕರ್ನಾಟಕ ಜಾನಪದ ಪರಿಷತ್‌ನ ತಾಲ್ಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಸಂಗೀತ ಪ್ರಕಾರಗಳಾದ ತಮಟೆ, ನಗಾರಿ, ಕಹಳೆಗಳು ಕಣ್ಮರೆಯಾಗುತ್ತಿವೆ. ಜೋಗುಳ, ರಾಗಿ- ಜೋಳ ಬೀಸುವ ಹಾಗೂ ಸೋಬಾನೆ ಪದಗಳು ಇತಿಹಾಸ ಸೇರಿವೆ. ಶ್ರಮಶಕ್ತಿಯ ಬಗ್ಗೆ ಅಗೌರವ ಬೆಳೆಯುತ್ತಿದ್ದು, ಯುವಕರಲ್ಲಿ ದುಡಿಯುವುದು ಅವಮಾನ ಎಂಬ ಭಾವನೆ ಬೆಳೆಯುತ್ತಿದೆ.

ಪರಂಪರಾಗತವಾಗಿ ಬಂದ ಜನಪದ ವೈದ್ಯ ಪದ್ಧತಿ ಬದಲಿಗೆ ಇಂಗ್ಲಿಷ್ ವೈದ್ಯ ಪದ್ಧತಿ ಬಗ್ಗೆ ವ್ಯಾಮೋಹ ಹೆಚ್ಚಾಗಿದೆ. ಜನ ಜೀವನದ ಜತೆ ಹಾಸುಹೊಕ್ಕಾಗಿರುವ, ಹೃದಯ ಶ್ರೀಮಂತಿಕೆಯ ಪ್ರತೀಕವಾದ ಜನಪದ ಕಲೆ, ಸಂಗೀತಗಳನ್ನು ಉಳಿಸುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ವಿ.ಜಯರಾಂ ಅರ್ಜುನಪುರಿ ಅಪ್ಪಾಜಿಗೌಡ ಪ್ರೊ.ಎಚ್.ಬಿ.ಶಿವ ಲಿಂಗಪ್ಪ, ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ಮಧುಸೂದನ ಕೆ.ಎಸ್.ಸೋಮಶೇಖರ್, ಸದಾಶಿವಮೂರ್ತಿ, ವಿ.ನಾರಾಯಣ, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಮರಿಸ್ವಾಮಿಗೌಡ, ಶಿವನಂಜೇಗೌಡ, ಚಂದ್ರಶೇಖರ್, ಧನ್ಯಕುಮಾರ್ ಇದ್ದರು.

ಚಿಕ್ಕಅರಸಿನಕೆರೆ ಹಾಗೂ ಕೀಲಾರ ಜಾನಪದ ಕಲಾವಿದರು ಸೋಮನ ಕುಣಿತ, ವೀರಗಾಸೆ, ಪಟದ ಕುಣಿತ, ಚರ್ಮವಾದ್ಯ ಪ್ರದರ್ಶಿಸಿದರು. ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.