ಕೆರಗೋಡು: ಸಮೀಪದ ಹೊಡಾಘಟ್ಟ ಗ್ರಾಮದಲ್ಲಿಯ ನಾಲ್ಕು ದಶಕಗಳಿಗೂ ಹಳೆಯ ಧಾರ್ಮಿಕ ಶ್ರದ್ಧಾಕೇಂದ್ರ ಶಂಕರಮಠ ನಿರ್ವಹಣೆ ಕೊರತೆಯಿಂದ ಪಾಳುಬಿದ್ದಿದೆ.
ಮೊದಲು ಇಲ್ಲಿ ಗುಡಿಸಲಿನಲ್ಲಿ ಕೆಲ ಸನ್ಯಾಸಿಗಳು ಭಜನೆ ಮಾಡುತ್ತ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು.
ಬಳಿಕ ಗ್ರಾಮದ ಕೆಲ ಮುಖಂಡರ ಒತ್ತಾಸೆ ಮೇರೆಗೆ ಸರ್ಕಾರದ ಅನುದಾನದಿಂದ ಸುಸಜ್ಜಿತ ಕಟ್ಟಡ ನಿರ್ಮಾಣದಿಂದ ಶಂಕರಮಠವಾಯಿತು. ಕೆಲ ಕಾಲಾ ನಂತರ ಸೂಕ್ತ ನಿರ್ವಹಣೆ ಕಾಣದೇ ಕಟ್ಟಡ ಶಿಥಿಲಗೊಂಡಿತು. ಇದೀಗ ಗಿಡ–ಗಂಟಿಗಳು ಬೆಳೆದು ಯಾರೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಜನರು ಒಂದೆಡೆ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಸ್ಥಳ ಈಗ ಅನಾಥವಾಗಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ತ್ಯಾಗರಾಜು ಮಾತನಾಡಿ , ‘ಈ ಪ್ರದೇಶ ಗ್ರಾಮ ಠಾಣಾ ವ್ಯಾಪ್ತಿಯಲ್ಲಿದ್ದರೂ ಜೀರ್ಣೋದ್ಧಾರ ಮಾಡುವುದು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ. ಈ ಸಂಬಂಧ ಗ್ರಾಮಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ಅಭಿವೃದ್ಧಿಗಾಗಿ ತಹಶೀಲ್ದಾರ್ ಬಳಿ ಮನವಿ ಮಾಡಲಾಗುವುದು’ ಎಂದು ಹೇಳಿದರು.
ಇದನ್ನು ಅಭಿವೃದ್ಧಿ ಪಡಿಸಿದರೆ ಧಾರ್ಮಿಕ ಕಾರ್ಯಕ್ರಮಗಳು, ಜಾಗೃತಿ ಕಾರ್ಯಕ್ರಮಗಳು, ಸರಳ ವಿವಾಹಗಳನ್ನು ನಡೆಸಬಹುದು ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಕಂದರಾಜು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.