ADVERTISEMENT

ದನಗಳ ಜಾತ್ರೆ: ಕುಡಿಯುವ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 9:35 IST
Last Updated 3 ಫೆಬ್ರುವರಿ 2011, 9:35 IST
ದನಗಳ ಜಾತ್ರೆ: ಕುಡಿಯುವ ನೀರಿನ ಸಮಸ್ಯೆ
ದನಗಳ ಜಾತ್ರೆ: ಕುಡಿಯುವ ನೀರಿನ ಸಮಸ್ಯೆ   

ಕೃಷ್ಣರಾಜಪೇಟೆ: ಬುಧವಾರದಿಂದ ಆರಂಭಗೊಂಡಿರುವ ತಾಲ್ಲೂಕಿನ ಹೇಮಗಿರಿಯ ದನಗಳ ಜಾತ್ರೆಯಲ್ಲಿ ಭಾಗವಹಿಸುತ್ತಿರುವ ರೈತರಿಗೆ ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಸೇರಿದಂತೆ ವಿವಿಧ ಕೊರತೆ ಎದುರಾಗಿದ್ದು, ಕೂಡಲೇ ಇವುಗಳನ್ನು ನೀಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈ ಬಾರಿ ಜಾತ್ರೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ರಾಸುಗಳು ಬಂದಿವೆ. ಆದರೆ ರಾತ್ರಿ ವೇಳೆ ಜಾತ್ರೆಯ ಮಾಳದಲ್ಲಿ ಸೂಕ್ತ ಪ್ರಮಾಣದ ಬೆಳಕಿನ ಸೌಲಭ್ಯ ಇಲ್ಲದ ಕಾರಣ ತುಂಬಾ ತೊಂದರೆಯಾಗುತ್ತಿದೆ. ಕಳ್ಳರ ಹಾವಳಿ ಮತ್ತು ಕ್ರೂರ ಪ್ರಾಣಿಗಳ ದಾಳಿಯ ಭಯ ಉಂಟಾಗಿದೆ ಎಂದು ರೈತರು ದೂರಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಈ ಜಾತ್ರೆಗೆ ಬರುತ್ತಿದ್ದು, ಈ ಬಾರಿ ಅಚ್ಚುಕಟ್ಟಾಗಿ ಜಾತ್ರೆಯನ್ನು ವ್ಯವಸ್ಥೆಗೊಳಿಸಲಾಗಿದೆ. ಆದರೆ ಜಾತ್ರೆ ಮಾಳದಲ್ಲಿ ರಾತ್ರಿ ವೇಳೆ ತೃಪ್ತಿಕರ ಪ್ರಮಾಣದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಕಳ್ಳಕಾಕರ ಭಯ ಉಂಟಾಗಿದೆ ಎಂದರು. ಉತ್ತಮ ರೀತಿಯಲ್ಲಿ ಬೇರೆಲ್ಲಾ ಸೌಲಭ್ಯಗಳು ದೊರೆಯುತ್ತಿವೆ. ಇದಲ್ಲದೆ ರೈತರಿಗೆ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯ ಬೇಕು. ಜಾತ್ರೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ತಡೆಯಬೇಕು ಎಂದು ಪ್ರತಿವರ್ಷ ಜಾತ್ರೆಗೆ ಬರುತ್ತಿರುವ ಸಾಲಿಗ್ರಾಮದ ರೈತ ಚನ್ನೇಗೌಡ, ಇತರರು ಹೇಳಿದ್ದಾರೆ. ಈ ಬಾರಿ ಯಶಸ್ವಿಯಾಗಿ ಜಾತ್ರೆಯನ್ನು ನಡೆಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಇದನ್ನು ಮೀರಿಯೂ ಅಲ್ಲಲ್ಲಿ ಗೋಚರಿಸುತ್ತಿರುವ ಸಮಸ್ಯೆಗಳ ಕಡೆಗೆ ಕೂಡಲೇ ಗಮನ ಹರಿಸುವುದಾಗಿ ತಹಶೀಲ್ದಾರ್ ಡಾ.ನಾಗರಾಜ್ ಭರವಸೆ ನೀಡಿದ್ದಾರೆ.    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.