ADVERTISEMENT

ದರಖಾಸ್ತು ಅರ್ಜಿ ಶೀಘ್ರ ವಿಲೇವಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 8:52 IST
Last Updated 14 ಮಾರ್ಚ್ 2018, 8:52 IST

ಶ್ರೀರಂಗಪಟ್ಟಣ: ದರಖಾಸ್ತು ಜಮೀನು ಮಂಜೂರು ಕೋರಿ ಅರ್ಜಿ ಸಲ್ಲಿಸಿರುವ ರೈತರಿಗೆ ಶೀಘ್ರ ಮಂಜೂರಾತಿ ಪತ್ರ ವಿತರಿಸಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಗ್ರಹಿಸಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್‌ ಡಿ. ನಾಗೇಶ್‌ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು, ‘ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ದರಖಾಸ್ತು ಸಂಬಂಧಿತ ಅರ್ಜಿಗಳು ವಿಲೇವಾರಿಯಾಗಿವೆ. ಆದರೆ ಈ ತಾಲ್ಲೂಕಿನಲ್ಲಿ ಕೇವಲ ಸಭೆಗಳು ಮಾತ್ರ ನಡೆದಿವೆ. ಒಬ್ಬ ರೈತನಿಗೂ ಹೊಸದಾಗಿ ಸಾಗುವಳಿ ಪತ್ರ ನೀಡಿಲ್ಲ. ರೈತರು ಹತ್ತಾರು ವರ್ಷಗಳಿಂದ ಕಚೇರಿಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನ ಸಾಗುವಳಿ ಪತ್ರ ನೀಡಬೇಕು’ ಎಂದು ದರಖಾಸ್ತು ಸಮಿತಿ ಸದಸ್ಯ ಕೃಷ್ಣೇಗೌಡ, ಎಂ. ಪುಟ್ಟೇಗೌಡ, ಗಂಗಾಧರ್‌ ಇತರರು ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಡಿ. ನಾಗೇಶ್‌, ‘ದರಖಾಸ್ತು ಜಮೀನು ಮಂಜೂರಾತಿ ಕೋರಿ ತಾಲ್ಲೂಕಿನಾದ್ಯಂತ 3778 ಅರ್ಜಿಗಳು ಬಂದಿವೆ. ಈ ಪೈಕಿ 1392 ಅರ್ಜಿಗಳ ಪರಿಶೀಲನೆ ನಡೆದಿದೆ. ಕೆ.ಶೆಟ್ಟಹಳ್ಳಿ ಹೋಬಳಿಯಲ್ಲಿ 21 ಅರ್ಜಿಗಳ ಮಂಜೂರಾತಿಗೆ ಕ್ರಮ ವಹಿಸಿದ್ದು, ಅವುಗಳನ್ನು ಸ್ಥೀರೀಕರಣಗೊಳಿಸಲು ಮತ್ತೊಂದು ಸಭೆ ನಡೆಸಲಾಗುವುದು. ಅರಕೆರೆ ಹೋಬಳಿಯಲ್ಲಿ 2 ಮತ್ತು ಬೆಳಗೊಳ ಹೋಬಳಿಯಲ್ಲಿ 2 ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಲಾಗಿದೆ’ ಎಂದರು.

ADVERTISEMENT

‘ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ ಎಂಬ ದೂರುಗಳಿವೆ. ಅದನ್ನು ಸರಿಪಡಿಸಬೇಕು’ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.