ADVERTISEMENT

ದಸರಾ ಬೊಂಬೆ ನಿನ್ನನು ನೋಡಲು...!

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 5:25 IST
Last Updated 18 ಅಕ್ಟೋಬರ್ 2012, 5:25 IST

ಶ್ರೀರಂಗಪಟ್ಟಣ: ಪಟ್ಟಣದ ಪ್ರಸಿದ್ಧ ಜೋತಿಷಿ ಡಾ.ಭಾನುಪ್ರಕಾಶ್ ಶರ್ಮಾ ಅವರ ಮನೆಯಲ್ಲಿ ದಸರಾ ಬೊಂಬೆಗಳ ಪ್ರದರ್ಶನ ಜನಮನ ಸೆಳೆಯುತ್ತಿದೆ.

  ಪಟ್ಟಣದ ಅಂಚೆ ತಿಪ್ಪಯ್ಯ ಬೀದಿಯಲ್ಲಿರುವ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ ಕಚೇರಿಯ ಕಟ್ಟಡದಲ್ಲಿ 1800ಕ್ಕೂ ಹೆಚ್ಚು ಬೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಈ ಪೈಕಿ ಶ್ರೀಕಂಠದತ್ತ ಒಡೆಯರ್ ಅವರ ರಾಜ ದರ್ಬಾರ್ ಸನ್ನಿವೇಶ ಗಮನ ಸೆಳೆಯುತ್ತಿದೆ.

ಅಲ್ಲದೆ, ಮೈಸೂರಿನ  ಅಂಬಾವಿಲಾಸ ಅರಮೆನೆ, ಗುಡಿ ಕೈಗಾರಿಕೆಗಳು, ಗಣೇಶನ ಕ್ರಿಕೆಟ್, ಕಂಚಿ ಗರುಡೋತ್ಸವ, ತಿರುಪತಿ ಶ್ರೀನಿವಾಸನ ಉತ್ಸವ, ಉಡುಪಿಯ ಶ್ರೀಕೃಷ್ಣ ರಥ, ಪಂಡರಾಪುರದ ಪಾಂಡುರಂಗ, ರಾಮಸೇತು, ವಿಷ್ಣುವಿನ ದಶಾವತಾರವನ್ನು ಬಿಂಬಿಸುವ ಬೊಂಬೆಗಳು ಆತ್ಯಾಕರ್ಷಕವಾಗಿವೆ.

ರಾಗಿ ಬೀಸುವುದು, ಮಸಾಲೆ ರುಬ್ಬುವುದು ಇತರ ಗ್ರಾಮೀಣ ಗೃಹ ಕೃತ್ಯಗಳು, ಆದಿವಾಸಿಗಳ ಜೀವನ, ಮಹಾಬಲಿಪುರಂ, ಅತಿರುದ್ರ ಮಹಾಯಾಗ, ಗಜೇಂದ್ರ ಮೋಕ್ಷ, ಅಶೋಕ ವನದಲ್ಲಿ ಸೀತೆ ಇತರ ಸನ್ನಿವೇಶಗಳು ಮತ್ತೆ ನೋಡಬೇಕೆನಿಸುತ್ತವೆ. 120 ವರ್ಷಗಳಷ್ಟು ಹಳೆಯದಾದ ಫ್ರೆಂಚ್ ಸೈನಿಕನ ಬೊಂಬೆ ಕೂಡ ಪ್ರದರ್ಶನದಲ್ಲಿದೆ. ಈ ಬೊಂಬೆ ಪ್ರದರ್ಶನ ವೀಕ್ಷಿಸಲು ಪಟ್ಟಣದ ವಿವಿಧ ಬಡಾವಣೆಯ ಜನರು ಬರುತ್ತಿದ್ದಾರೆ.

ಹಾಗೆ ಬರುವವರಿಗೆ ಚಕ್ಕುಲಿ, ಕೋಡುಬಳೆ, ಸಿಹಿ ತಿನಿಸು ಕೊಟ್ಟು ಸತ್ಕರಿಸಲಾಗುತ್ತಿದೆ. `ಸಂಜೆ 6ರಿಂದ 9ರ ವರೆಗೆ ನೂರಾರು ಜನ ದಸರಾ ಬೊಂಬೆಗಳನ್ನು ವೀಕ್ಷಿಸಲು ಆಗಮಿಸುತ್ತಿದ್ದು, ಅ.29ರ ವರೆಗೆ ಬೊಂಬೆ ಪ್ರದರ್ಶನ ಇರುತ್ತದೆ~ ಎಂದು ಡಾ.ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.