ಕೃಷ್ಣರಾಜಪೇಟೆ: ಕೆಲ ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ಪಟ್ಟಣದ ಐತಿಹಾಸಿಕ ದೇವೀರಮ್ಮಣ್ಣಿ ಕೆರೆಯು ತುಂಬಿ ಕೋಡಿ ಬಿದ್ದಿದೆ. ಎತ್ತರದ ಕೋಡಿಯಿಂದ ಕೆಳಗೆ ಧುಮುಕಿ ರಭಸವಾಗಿ ಹೊರ ಬರುತ್ತಿರುವ ನೀರು ಹಾಲ್ನೊರೆಯಂತೆ ಕಂಗೊಳಿಸುತ್ತಾ ನೋಡುಗರನ್ನು ಆಕರ್ಷಿಸುತ್ತಿದೆ.
ಮೈಸೂರಿನ ಅರಸರಾಗಿದ್ದ ಕೃಷ್ಣರಾಜ ಒಡೆಯರ್ ಅವರ ರಾಣಿ ದೇವೀರಮ್ಮಣ್ಣಿ ಇದೇ ತಾಲ್ಲೂಕಿನ ಮಾದಾಪುರದವರು. ತಮ್ಮ ತವರೂರಿನ ಜನರ ಅನುಕೂಲಕ್ಕಾಗಿ ದೇವೀರಮ್ಮಣ್ಣಿ ಕೆರೆಯೊಂದನ್ನು ಕಟ್ಟಿಸುವಂತೆ ಮಹಾರಾಜರಿಗೆ ಭಿನ್ನಹ ಇಟ್ಟರು. ರಾಣಿಯ ಬೇಡಿಕೆಯನ್ನು ಮನ್ನಿಸಿದ ಮಹಾರಾಜರು ಈ ಕೆರೆಯನ್ನು ಕಟ್ಟಿಸಿ, ರಾಣಿಯವರ ಹೆಸರನ್ನೇ ಇಟ್ಟರು ಎಂದು ಇತಿಹಾಸ ತಿಳಿಸುತ್ತದೆ.
ನೂರಾರು ಎಕರೆ ಭೂಮಿಗೆ ನೀರುಣಿಸುತ್ತಿರುವ ಈ ಕೆರೆಗೆ ವಳಗೆರೆ ಮೆಣಸ ಕೆರೆ, ಅಗ್ರಹಾರಬಾಚಹಳ್ಳಿ ಕೆರೆ ಸೇರಿದಂತೆ ವಿವಿಧ ಕೆರೆಗಳಿಂದ ಹಾಗೂ ಹೇಮಾವತಿ ನಾಲೆಯಿಂದ ನೀರು ಹರಿದು ಬರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.