ADVERTISEMENT

`ದೇಶದ ಅಭಿವೃದ್ಧಿ ಕುಂಠಿತ'

​ಪ್ರಜಾವಾಣಿ ವಾರ್ತೆ
Published 21 ಜನವರಿ 2013, 6:55 IST
Last Updated 21 ಜನವರಿ 2013, 6:55 IST
ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ವು ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವದ ಅಂಗವಾಗಿ ಭಾನುವಾರ `ಯುವಶಕ್ತಿ ಸಂಗಮ' ಕಾರ್ಯಕ್ರಮವನ್ನು ಏರ್ಪಡಿಸಿತ್ತು.  ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರದ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್, ಚಂದ್ರಶೇಖರ್ ಭಂಡಾರಿ, ಆದಿಚುಂಚನಗರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಇದ್ದಾರೆ.
ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ವು ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವದ ಅಂಗವಾಗಿ ಭಾನುವಾರ `ಯುವಶಕ್ತಿ ಸಂಗಮ' ಕಾರ್ಯಕ್ರಮವನ್ನು ಏರ್ಪಡಿಸಿತ್ತು. ಆರ್‌ಎಸ್‌ಎಸ್ ದಕ್ಷಿಣ ಮಧ್ಯಕ್ಷೇತ್ರದ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್, ಚಂದ್ರಶೇಖರ್ ಭಂಡಾರಿ, ಆದಿಚುಂಚನಗರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಇದ್ದಾರೆ.   

ಮಂಡ್ಯ: `ಜಗತ್ತಿಗೆ ಜೀವನ ಸಂದೇಶ ಸಾರಿದ, ಎಲ್ಲರನ್ನೂ-ಎಲ್ಲವನ್ನೂ ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ವಿಶಾಲ ದೃಷ್ಟಿಕೋನ ಇರುವ ಹಿಂದೂ ಸಮಾಜವನ್ನು ಸಂಕುಚಿತ-ಕೋಮುವಾದಿಗಳು ಎನ್ನುವುದು ಎಷ್ಟು ಸರಿ' ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ದಕ್ಷಿಣ ಮಧ್ಯಕ್ಷೇತ್ರದ ಕ್ಷೇತ್ರೀಯ ಸಂಪರ್ಕ ಪ್ರಮುಖ್   ಡಾ. ಪ್ರಭಾಕರ ಭಟ್ ಪ್ರಶ್ನಿಸಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸ್ವಾಮಿ ವಿವೇಕಾನಂದ ಅವರ 150ನೇ ಜಯಂತಿ ಪ್ರಯುಕ್ತ ಆಯೋಜಿಸಿದ್ದ `ಯುವಶಕ್ತಿ ಸಂಗಮ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಗತ್ತಿನ ಹಿತ ಬಯಸುವ ಏಕೈಕ ಸಮಾಜ ನಮ್ಮದು. ಜಾತಿಗಿಂತ ನೀತಿ ಮುಖ್ಯ ಎಂದು ಪ್ರತಿಪಾದಿಸುವ ಹಿಂದೂ ಸಮಾಜವನ್ನು ಕೋಮುವಾದಿ ಎನ್ನುವುದು ಸಮರ್ಥನೀಯವೇ ಎಂದು ಪ್ರಶ್ನಿಸಿದರು.

ಹಿಂದೂ ಎನ್ನುವ ಶಬ್ದವನ್ನು ಜನರ ಮನಸ್ಸಿನಿಂದ ತೆಗದುಹಾಕುವ ಪ್ರಯತ್ನ ನಡೆದಿದೆ. ಹಿಂದೂ ಎಂದರೆ ದೇಶ ವಿಭಜನೆಗೆ ಕಾರಣವಾದಿ, ಕೋಮುವಾದಿ ಎಂದು ಬಿಂಬಿಸುವ ಪ್ರಯತ್ನಗಳು ನಡೆದಿವೆ. ಇದನ್ನು ಒಪ್ಪಬಹುದೇ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 60ಕ್ಕೂ ಹೆಚ್ಚು ವರ್ಷಗಳೇ ಕಳೆದರೂ ಇಂದಿಗೂ ಅಭಿವೃದ್ಧಿ ಎನ್ನುವುದು ಕುಂಟುತ್ತಾ ಸಾಗಿದೆ. ಜಪಾನ್‌ನಂಥ ಚಿಕ್ಕ ದೇಶ ದೊಡ್ಡಶಕ್ತಿಯಾಗಿ ಹೊರಹೊಮ್ಮಿದೆ. ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ, ಪರಂಪರೆ ಇರುವ ಹಾಗೂ ಜೀವನ ದರ್ಶನ ಮಾಡಿಸಿದ ಭಾರತ ಏಕೆ ಮೇಲೆ ಬರುತ್ತಿಲ್ಲ, ಶ್ರೇಷ್ಠ ಸ್ಥಾನ ಪಡೆಯುತ್ತಿಲ್ಲ ಎಂದರು.

ತಲೆಯೆತ್ತಿ, ಎದೆಯುಬ್ಬಿಸಿ ನಿಲ್ಲುವ, ಸಕಾರಾತ್ಮಕ ಚಿಂತನೆ ಮಾಡುವ, ಈ ಮಣ್ಣಿನ ಸತ್ವ ಹೀರಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಲು ಯುವಪಡೆ ಮುಂದಾಗಬೇಕಿದೆ ಎಂದು ಕರೆ ನೀಡಿದರು. ಅಲ್ಪಸಂಖ್ಯಾತರ ಹೆಸರಿನಲ್ಲಿ ಕಾನೂನು ಮಾಡುವ ಮೂಲಕ ಅವರನ್ನು ರಕ್ಷಿಸಲಾಗುತ್ತಿದೆ. ಬಹುಸಂಖ್ಯಾತರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದಿಚುಂಚನಗಿರಿಯ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಪ್ರಾಂತ ಸಂಘ ಸಂಚಾಲಕ ಮಾ.ವೆಂಕಟರಾವ್,  ಮೈಸೂರು ವಿಭಾಗ ಸಂಘ ಸಂಚಾಲಕ ವಾಮನರಾವ್, ಸಂಘದ ಹಿರಿಯ ಪ್ರಚಾರಕ್ ಕಾ.ಶಿ.ನಾಗರಾಜ್ ಉಪಸ್ಥಿತರಿದ್ದರು. `ಯುವ ಸಂಗಮ' ಕಾರ್ಯಕ್ರಮ ಹಿನ್ನೆಲೆಯಲ್ಲಿ ನಗರದಲ್ಲಿರುವ ಬಹುತೇಕ ರಸ್ತೆಗಳು ಕೇಸರಿ ಮಯವಾಗಿದ್ದು, ದೇಶಭಕ್ತಿಯ ಬ್ಯಾನರ್‌ಗಳನ್ನು, ತಳಿರುತೋರಣವನ್ನು ಅಲ್ಲಲ್ಲಿ ಕಟ್ಟಲಾಗಿತ್ತು. ಭಗವಾಧ್ವಜವನ್ನು ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಾಯಿತು. ಸಚಿವ ಸಿ.ಪಿ.ಯೋಗೇಶ್ವರ್ ಭೇಟಿ ನೀಡಿದ್ದರು.

ಶಾಸಕ ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಪಿ.ಮಹೇಶ್ ಅವರು ಗಣವೇಷ ಪೋಷಕ ಧರಿಸಿ ಪಾಲ್ಗೊಂಡಿದ್ದರು.

ಗಮನ ಸೆಳೆದ ಪಥ ಸಂಚಲನ
ಸರಸ್ವತಿ, ಯಮುನಾ ಮತ್ತು ಗಂಗಾ ಎಂಬ ಮೂರು ಗಣವೇಷಧಾರಿಗಳ ತಂಡಗಳು ಕ್ರಮವಾಗಿ ಕಾಳಿಕಾಂಭ ಸಮುದಾಯ ಭವನ, ಹಾಲಹಳ್ಳಿ ಕಾವೇರಿ ಪ್ರೌಢಶಾಲೆ ಮತ್ತು ಚಾಮುಂಡೇಶ್ವರಿ ದೇವಸ್ಥಾನ ಮಾರ್ಗವಾಗಿ ಪಥಸಂಚಲನ ನಡೆಸಿ ನಗರದ ಸರ್ಕಾರಿ ಬಸ್ ನಿಲ್ದಾಣ ಸಮೀಪ ವೃತ್ತದಲ್ಲಿ ಸಂಗಮಗೊಂಡವು.

ಖಾಕಿ ಚೆಡ್ಡಿ, ಬಿಳಿ ಅಂಗಿ, ತಲೆ ಮೇಲೆ ಕಪ್ಪು ಟೋಪಿ, ಕೈಯಲ್ಲಿ ಕೋಲು (ದಂಡ) ಹಿಡಿದ್ದ ಗಣವೇಷಧಾರಿಗಳು ಶಿಸ್ತುಬದ್ಧ ಪಥ ಸಂಚಲನ ನಡೆಸಿ, ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT