ADVERTISEMENT

ದೇಸಿ ಕಲೆ ಉಳಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 11:07 IST
Last Updated 12 ಅಕ್ಟೋಬರ್ 2017, 11:07 IST

ಶ್ರೀರಂಗಪಟ್ಟಣ: ‘ಆಧುನಿಕತೆಯ ಭರದಲ್ಲಿ ದೇಸಿ ಕಲೆಗಳು ಒಂದೊಂದಾಗಿ ನಶಿಸುತ್ತಿವೆ’ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ವಿಷಾದ ವ್ಯಕ್ತಪಡಿಸಿದರು.

ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ಉಮಾಮಹೇಶ್ವರ ಜಾತ್ರೆ ಅಂಗವಾಗಿ ಮಂಗಳವಾರ ಸಂಜೆ ಏರ್ಪಡಿಸಿದ್ದ ‘ದಕ್ಷಯಜ್ಞ’ ಅಥವಾ ‘ಭೃಗು ಮುನಿಯ ಗರ್ವಭಂಗ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಟಕ, ಹರಿಕತೆ ಸೇರಿದಂತೆ ಜಾನಪದ ಆಟೋಟಗಳು ನೇಪಥ್ಯಕ್ಕೆ ಸರಿಯುತ್ತಿವೆ. ಸಿನಿಮಾ ಮತ್ತು ಧಾರಾವಾಹಿ ನೋಡುವ ಗೀಳು ಹೆಚ್ಚುತ್ತಿದೆ. ಜನ ಜೀವನದ ಜತೆ ಹಾಸು ಹೊಕ್ಕಾಗಿರುವ ಜನಪದ ಕಲೆಗಳನ್ನು ಉಳಿಸಲು ಸಂಘ–ಸಂಸ್ಥೆಗಳು ಶ್ರಮಿಸಬೇಕು’ ಎಂದು ಹೇಳಿದರು. ‘ಬೆಳವಾಡಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ಕೊಡಿಸುತ್ತೇನೆ’ ಎಂದು ಅವರು ಭರವಸೆ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಮುಖಂಡ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ‘ಗ್ರಾಮೀಣ ಪ್ರದೇಶದ ಯುವ ಜನರು ಹುಟ್ಟೂರಿನ ಅಭಿವೃದ್ಧಿಗೆ ಒಗ್ಗೂಡಿ ಶ್ರಮಿಸಬೇಕು. ಬೆಳವಾಡಿ ಗ್ರಾಮ ಮೈಸೂರು ನಗರಕ್ಕೆ ತೀರಾ ಹತ್ತಿರದಲ್ಲಿದ್ದು ಶಿಕ್ಷಣ ಸಂಸ್ಥೆಗಳು, ದೊಡ್ಡ ಕೈಗಾರಿಕೆಗಳು ತಲೆ ಎತ್ತುತ್ತಿವೆ. ಈ ಭಾಗದ ಭೂಮಿಗೆ ನಿರೀಕ್ಷೆಗೂ ಮೀರಿ ಬೆಲೆ ಬಂದಿದೆ. ರೈತರು ತಮ್ಮ ಕೃಷಿ ಜಮೀನು ಮಾರಿಕೊಳ್ಳದೆ ಮುಂದಿನ ತಲೆಮಾರಿಗೆ ಉಳಿಸಬೇಕು’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.