ADVERTISEMENT

ನಿವೇಶನ ಹಂಚಿಕೆ ಪ್ರಕ್ರಿಯೆ ರದ್ದು: ಸಚಿವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:20 IST
Last Updated 2 ಜನವರಿ 2012, 10:20 IST

ಮಂಡ್ಯ: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮಾಡಿದ್ದ 107 ನಿವೇಶನಗಳ ಹಂಚಿಕೆ ನಿಯಮ ಬಾಹಿರ ಆಗಿದ್ದ ಹಿನ್ನೆಲೆಯಲ್ಲಿ ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣ ರದ್ದು ಪಡಿಸಲಾಗಿದೆ ಎಂದು ಕಾನೂನು ಮತ್ತು ನಗರಾಭಿವೃದ್ಧಿ ಖಾತೆ ಸಚಿವ ಎಸ್. ಸುರೇಶ ಕುಮಾರ್ ಪ್ರಕಟಿಸಿದರು.

ನಿವೇಶನ ಹಂಚಿಕೆ ಮಾಡಿದ್ದ ಸಭೆ ನಿರ್ಣಯಗಳನ್ನೇ ರದ್ದುಪಡಿಸಲಾಗಿದೆ. ಅಲ್ಲದೆ, ಈ ವಿಷಯದಲ್ಲಿ ಕರ್ತವ್ಯ ಲೋಪ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೂ ಸೂಚಿಸಲಾಗಿದೆ ಎಂದು ಭಾನುವಾರ ಪ್ರತಿಕ್ರಿಯಿಸಿದರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡಿ, ಈ ಹಂಚಿಕೆ ಪ್ರಕ್ರಿಯೆಯಲ್ಲಿ ನಿವೇಶನ ಪಡೆದಿದ್ದ ಶಾಸಕರು ಅದನ್ನು ಪರಭಾರೆ ಮಾಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ಅದನ್ನೂ ಪರಿಶೀಲಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಹಂಚಿಕೆಯಾದ ನಿವೇಶನಗಳು ಮಾರಾಟ ಆಗಿವೆ ಎಂಬುದರ ಬಗೆಗೆ ಮಾಹಿತಿ ಇಲ್ಲ. ಯಾವ ದರಕ್ಕೆ ಹಂಚಿಕೆ ಮಾಡಲಾಗಿತ್ತು, ಯಾವ ದರಕ್ಕೆ ಮಾರಿಕೊಂಡಿದ್ದಾರೆ. ಸ್ಟಾಂಪ್ ಶುಲ್ಕ ಎಷ್ಟು ಇತ್ಯಾದಿ ಅಂಶ ಪರಿಶೀಲಿಸಬೇಕು. ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಧ್ಯಕ್ಷರನ್ನು ಪದಚ್ಯುತಿ ಕುರಿತ ಪ್ರಶ್ನೆಗೆ, ಅಧ್ಯಕ್ಷೆಯಾಗಿದ್ದ ವಿದ್ಯಾ ನಾಗೇಂದ್ರ ಅವರ ಅಧಿಕಾರವಧಿ ಮುಗಿದಿತ್ತು. ಈ ಹಿನ್ನೆಲೆಯಲ್ಲಿ ಮುಡಾ ಆಡಳಿತವನ್ನು ನಿಯಮಗಳ ಅನುಸಾರ ಜಿಲ್ಲಾಧಿಕಾರಿಗೆ ವಹಿಸಲಾಗಿದೆ. ಇದನ್ನು ಕಾನೂನು ಅನುಸಾರ ಮಾಡಲಾಗಿದೆ. ಇದಕ್ಕೆ ಬೇರೆ ಯಾವುದೇ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.