ADVERTISEMENT

ನೀರಿಗೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಬೀಗ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2011, 6:50 IST
Last Updated 9 ಏಪ್ರಿಲ್ 2011, 6:50 IST
ನೀರಿಗೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಬೀಗ
ನೀರಿಗೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಬೀಗ   

ಶ್ರೀರಂಗಪಟ್ಟಣ: ಕಳೆದ ಒಂದು ವಾರದಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿದೆ. ಆದ್ದರಿಂದ ಕೂಡಲೇ ಸಮರ್ಪಕವಾಗಿ ನೀರು ಒದಗಿಸಬೇಕು ಎಂದು ಅಗ್ರಹಿಸಿ ತಾಲ್ಲೂಕಿನ ಬೆಳಗೊಳ ಗ್ರಾಮಸ್ಥರು ಶುಕ್ರವಾರ  ಗ್ರಾಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಸುಮಾರು ಎರಡು ತಾಸು ಗ್ರಾಪಂ ಕಚೇರಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿದರು. ಗ್ರಾಪಂ ಸಿಬ್ಬಂದಿ ಮತ್ತು ಅಧ್ಯಕ್ಷ, ಸದಸ್ಯರ ವಿರುದ್ಧ ಘೋಷಣೆ ಕೂಗಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಕಚೇರಿಯ ಹೊರಗೆ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಯಿತು. ಒಂದು ಹಂತದಲ್ಲಿ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಆರ್‌ಎಸ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು.

  ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಸಮರ್ಪಕ ಕುಡಿಯುವ ನೀರಿಲ್ಲದೆ ಜನರು ಬವಣೆಪಡು ತ್ತಿದ್ದಾರೆ. ಬಿಂದಿಗೆ ನೀರಿಗೂ ತತ್ವಾರವಾಗಿದೆ. ಕೋಟಿ ರೂ. ವೆಚ್ಚದಲ್ಲಿ, ವಿಶ್ವಬ್ಯಾಂಕ್ ಯೋಜನೆಯಡಿ ಆರಂಭಗೊಂಡ ಕುಡಿಯುವ ನೀರು ಯೋಜನೆ ಕಳಪೆ ಕಾಮಗಾರಿಯಿಂದ ಕೂಡಿದ್ದು, ನೀರು ಸರಬರಾಜಿಗೆ ಮೇಲಿಂದ ಮೇಲೆ ತೊಂದರೆಯಾಗುತ್ತಿದೆ. ಈ ಕುರಿತು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿಡಿಓಗೆ ಮನವಿ ಸಲ್ಲಿಸಿದ್ದರೂ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ನಿರ್ದೇಶಕ ಬಿ.ಡಿ.ಕೃಷ್ಣ, ದೇವೀರಮ್ಮ, ಯೋಗೇಶ್ ಇತರರು ದೂರಿದರು.

  ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯ ಬಿ.ವಿ.ಸುರೇಶ್ ಪ್ರತಿಭಟನಾ ಕಾರರ ಜತೆ ಚರ್ಚಿಸಿ ಶನಿವಾರದೊಳಗೆ ನೀರು ಕೊಡುವ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದರು. ಜಗದೀಶ್, ಮಲ್ಲೇಶ್, ಪಾರ್ವತಮ್ಮ, ಪುಷ್ಪಲತಾ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.