ADVERTISEMENT

ನೇರಲಕೆರೆ ಮದ್ಯ ಮುಕ್ತ ಗ್ರಾಮ!

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 4:05 IST
Last Updated 9 ಅಕ್ಟೋಬರ್ 2011, 4:05 IST

ಶ್ರೀರಂಗಪಟ್ಟಣ: ತಾಲ್ಲೂಕಿನ ನೇರಲಕೆರೆ ಗ್ರಾಮದ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದಿಲ್ಲ ಎಂದು ಗ್ರಾಮಸ್ಥರು ಶಪಥ ಮಾಡಿದ್ದಾರೆ. ಗ್ರಾಮದಲ್ಲಿ ಸೆ.26ರಂದು ಯಜಮಾನ್ ಮಾದೇಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದಾರೆ. ಕುಡಿದು ಬಂದು ಊರೊಳಗೆ ಗಲಾಟೆ ಮಾಡುವವರಿಗೆ ದಂಡ ಹಾಕುವ ನಿರ್ಣಯ ಕೈಗೊಂಡಿದ್ದಾರೆ.

ಗ್ರಾಮದ ಯಾವುದೇ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಮುಖಂಡರ ಸಭೆಯಲ್ಲಿ ಫರ್ಮಾನು ಹೊರಡಿಸಲಾಗಿದೆ. ನಿಯಮ ಮೀರಿ ಮದ್ಯ ಮರಾಟ ಮಾಡಿದ ವ್ಯಕ್ತಿಗೆ ರೂ.5001 ದಂಡ ಕೂಡ ವಿಧಿಸಲಾಗಿದೆ.

ಗ್ರಾಮದಲ್ಲಿ ಕುಡಿದು ಗಲಾಟೆ ಮಾಡುವ ಪ್ರಕರಣಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಯಜಮಾನ್ ಮಾದೇಗೌಡ, ಗ್ರಾ.ಪಂ. ಅಧ್ಯಕ್ಷ ಮಹೇಶ್, ಮಾಜಿ ಅಧ್ಯಕ್ಷ ಗಣೇಶ್‌ಸ್ವಾಮಿ, ಪಟೇಲ್ ಪುಟ್ಟಸ್ವಾಮಿಗೌಡ, ಎನ್.ಎಚ್.ಸಿದ್ದರಾಮು. ಗ್ರಾಪಂ ಸದಸ್ಯರು, ವಿನಾಯಕ ಹಾಗೂ ಕಾವೇರಿ ಕನ್ನಡ ಗೆಳೆಯರ ಬಳಗದ ಸದಸ್ಯರು ಚಾವಡಿ ಸೇರಿ ಈ ಒಕ್ಕೊರಲ ಹಾಗೂ ನಿರ್ಣಾಯಕ ತೀರ್ಮಾನ ಕೈಗೊಂಡಿದ್ದಾರೆ.

ನೇರಲಕೆರೆಯಲ್ಲಿ 5 ಸಾವಿರ ಜನಸಂಖ್ಯೆ ಇದ್ದು, ಪ್ರತಿ ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಮಾರಾಟ ಅಡೆ ತಡೆಯಿಲ್ಲದೆ ನಡೆಯುತ್ತಿತ್ತು. ಅಬಕಾರಿ ಅಧಿಕಾರಿಗಳಿಗೆ ಅಕ್ರಮ ಮದ್ಯ ಮಾರಾಟ ತಡೆಯುವಂತೆ ದೂರು ಸಲ್ಲಿಸಲಾಗಿತ್ತು.

ಆದರೆ, ಅವರು ಊರಿನತ್ತ ಮುಖ ಮಾಡಲಿಲ್ಲ. ಗ್ರಾಮದಲ್ಲಿ ಕುಡಿದು ಗಲಾಟೆ ಮಾಡುವವರ ಉಪಟಳ ಮಿತಿ ಮೀರಿದ್ದರಿಂದ ಮದ್ಯ ಮಾರಾಟದ ಮೇಲೆ ಊರಿನವರೇ ಕಡಿವಾಣ ಹಾಕಿದ್ದೇವೆ ಎಂದು ಗ್ರಾ.ಪಂ. ಅಧ್ಯಕ್ಷ ಎನ್.ಎಂ.ಮಹೇಶ್ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.