ಕೆ.ಆರ್.ಪೇಟೆ: ‘ನಾವು ಕಿಂಗ್ಮೇಕರ್ ಆಗುವಂತೆ ಮಾಡದೇ ಕಿಂಗ್ಗಳಾಗಿ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ. ಇದೊಂದು ಬಾರಿ ಜಾತ್ಯತೀತ ದಳದ ಕೈಹಿಡಿಯಿರಿ. ಪೂರ್ಣ ಅಧಿಕಾರ ಕೊಡಿ’ ಎಂದು ನಟ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು. ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ಶನಿವಾರ ಪಕ್ಷದ ತಾಲ್ಲೂಕು ಘಟಕ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
‘ಮುಂದಿನ ಸರ್ಕಾರ ರಚನೆಯಲ್ಲಿ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಮಾಧ್ಯಮಗಳ ಸಮೀಕ್ಷೆಗಳು ಹೇಳಿವೆ. ನಮಗೆ ನಿರ್ಣಾಯಕ ಪಾತ್ರ ಬೇಡ. ಪೂರ್ಣ ಅಧಿಕಾರ ಬೇಕು. ವಿದಾನಸಭೆಯಲ್ಲಿ ರೈತರ ಧ್ವಜ ಹಾರುವಂತಾಗಲು, ನಿಮ್ಮ ಮನೆಯ ಮಗ ಕುಮಾರಸ್ವಾಮಿ ಅವರು ಸಿ.ಎಂ ಆಗಲು ಪಕ್ಷವನ್ನು ಬೆಂಬಲಿಸಿ’ ಎಂದರು. ‘ಈ ಬಾರಿಯೂ ಕ್ಷೇತ್ರದ ಶಾಸಕರಾದ ನಾರಾಯಣಗೌಡ ಅವರನ್ನು ಮತ್ತೊಮ್ಮೆ ಬೆಂಬಲಿಸಿ’ ಎಂದು ಅವರು ಕೋರಿದರು.
ಶಾಸಕ ನಾರಾಯಣಗೌಡ ಮಾತನಾಡಿದರು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಎಚ್.ಡಿ.ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ಲೋಕೇಶ್ ಕುಮಾರ್, ತಾಲ್ಲೂಕು ಅಧ್ಯಕ್ಷ ವೆಂಕಟಸುಬ್ಬೇಗೌಡ, ಯುವ ಘಟಕದ ಅಧ್ಯಕ್ಷ ಹೇಮಂತ್ ಕುಮಾರ್, ಮಾಜಿ ಶಾಸಕ ಬಿ.ಪ್ರಕಾಶ್, ಮೈಸೂರು ಲ್ಯಾಂಪ್ಸ್ ಮಾಜಿ ಅಧ್ಯಕ್ಷ ಬಿ.ಎಲ್ ದೇವರಾಜು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶೀಳನೆರೆ ಸುರೇಶ್, ಸದಸ್ಯರಾದ ಎಚ್.ಟಿ.ಮಂಜು, ರಾಮದಾಸು, ಚಿನಕುರಳಿ ಲೋಕೇಶ್, ಮಾಜಿ ಉಪಾಧ್ಯಕ್ಷ ಕಿಕ್ಕೇರಿ ಪ್ರಭಾಕರ್,ಜಾನಕೀರಾಮು ಸೇರಿದಂತೆ ಪಕ್ಷದ ಹಲವು ಮುಖಂಡರು ಇದ್ದರು.
ಬೈಕ್ ರ್ಯಾಲಿ: ಸಮಾವೇಶಕ್ಕೆ ಬಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಬೈಕ್ ರ್ಯಾಲಿಯ ಮೂಲಕ ಅಪಾರ ಕಾರ್ಯಕರ್ತರು ಪಟ್ಟಣದ ಮುಖ್ಯ ರಸ್ತೆಯಲ್ಲಿ ಕರೆದುಕೊಂಡು ಬಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.