ADVERTISEMENT

`ಬಾಲ'ಗ್ರಹಣ ಬಿಡಿಸುವವರ‌್ಯಾರು?

ನಿರ್ವಹಣೆಗೆ ಕಾದಿರುವ ಮಂಡ್ಯ ಬಾಲಭವನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 6:58 IST
Last Updated 8 ಜುಲೈ 2013, 6:58 IST

ಮಂಡ್ಯ: ಇಲ್ಲಿನ ಅಶೋಕನಗರದಲ್ಲಿರುವ ಬಾಲ ಭವನವು ಸರಿಯಾದ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯಿಂದ ಕೂಡಿದೆ. ಇದರ ಬಯಲನ್ನಂತೂ ಕೇಳುವವರೇ ಇಲ್ಲದಂತಾಗಿದೆ.
ಬಾಲ ಭವನದ ಮುಖ್ಯ ಕಟ್ಟಡದಲ್ಲಿ ಯೋಗ, ನಾಟಕ, ತರಬೇತಿಯಂಥ ಶಿಬಿರಗಳು ಆಗಾಗ ನಡೆಯುತ್ತಿರುತ್ತವೆ. ಅದರಲ್ಲೂ ರಜೆಯಲ್ಲಿ ಜೋರಾಗಿರುತ್ತದೆ. ಮಕ್ಕಳು ಸಕ್ರಿಯವಾಗಿ ಭಾಗವಹಿಸುತ್ತಾರೆ.

ನಗರದ ಕೇಂದ್ರ ಗ್ರಂಥಾಲಯವು ಈ ಭವನದಲ್ಲಿ ಕೇಂದ್ರವೊಂದನ್ನು ತೆರೆದಿದೆ. ಅಲ್ಲಿ ನಿತ್ಯ ದಿನಪತ್ರಿಕೆಗಳು ಬರುತ್ತವೆ. ಅದರ ನಿರ್ವಹಣೆಯ ಕೆಲಸಕ್ಕೆ ಒಬ್ಬರನ್ನು ನೇಮಿಸಿಕೊಳ್ಳಲಾಗಿದೆ.

ಮಾತನಾಡಿದ್ದು ಪ್ರತಿಧ್ವನಿಯಾಗುತ್ತಿತ್ತು ಎನ್ನುವ ಕಾರಣಕ್ಕೆ ಇತ್ತೀಚೆಗೆ ರೂ 5 ಲಕ್ಷ ಖರ್ಚು ಮಾಡಿ `ಇಕೊ ಪ್ರೂಫ್' ವ್ಯವಸ್ಥೆ ಮಾಡಲಾಗಿದೆ. ಈಗ ಧ್ವನಿ ಚೆನ್ನಾಗಿ ಕೇಳುತ್ತದೆ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಿಮಲಾ.

ಬಾಲ ಭವನದಲ್ಲಿನ ಜಾಗ ಬಹಳ ಕಡಿಮೆಯಾಗಿದೆ. ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ಕಾರಣಕ್ಕೆ ಅದು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ವಿವಿಧ ಇಲಾಖೆಗಳು ತಮ್ಮ ಸಣ್ಣ ಪ್ರಮಾಣದ ಕಾರ್ಯಕ್ರಮಕ್ಕೆ ಇದನ್ನು ಬಳಸಿಕೊಳ್ಳಬಹುದಾಗಿದೆ.

ಬಾಲ ಭವನವನದ ನಿರ್ವಹಣೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊತ್ತುಕೊಂಡಿದೆ. ನಿರ್ವಹಣೆಗೆ ಹೆಚ್ಚಿನ ಹಣ ಇಲ್ಲದ್ದರಿಂದಾಗಿ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ವಿಮಲಾ ಅವರು.

ಭವನದ ವಿದ್ಯುತ್ ಬಿಲ್ ಪಾವತಿ ಸೇರಿದಂತೆ ನಿರ್ವಹಣೆಯನ್ನು ನಿಭಾಯಿಸುತ್ತಿದ್ದೇವೆ. ಆದರೆ, ವಿಶಾಲವಾಗಿರುವ ಆವರಣವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಿಲ್ಲ. ಉದ್ಯಾನ ನಿರ್ಮಾಣ ಮಾಡುವಂತೆ ನಗರಸಭೆಗೆ ಪತ್ರ ಬರೆಯಲಾಗಿದೆ ಎನ್ನುತ್ತಾರೆ.

ಉದ್ಯಾನ ಅಭಿವೃದ್ಧಿ ಸಾಧ್ಯವಿಲ್ಲ. `ವಾಕಿಂಗ್ ಪಾಥ್' ನಿರ್ಮಾಣ ಮಾಡಲಾಗುವುದು ಎಂದಿದ್ದರು. ಇಲ್ಲಿಯವರೆಗೆ ನಿರ್ಮಾಣವಾಗಿಲ್ಲ. ನಿರ್ಮಾಣವಾದರೆ, ಆ ಪ್ರದೇಶದ ಸುತ್ತಲಿನ ಜನರಿಗೂ ಅನುಕೂಲ ವಾಗಲಿದೆ.

ಜಾಗದ ಸುತ್ತಲೂ ಸುಭದ್ರವಾದ ಫೆನ್ಸಿಂಗ್ ಹಾಕಿರುವುದರಿಂದ ಅತಿಕ್ರಮಣದ ಅಪಾಯದಿಂದ ತಪ್ಪಿಸಿಕೊಂಡಿದೆ.  ಭವನಕ್ಕೆ ಸಮೀಪವಿರುವ ಖಾಸಗಿ ಶಾಲೆಯ ಮಕ್ಕಳು ಊಟಕ್ಕೆ ಇದೇ ಆವರಣಕ್ಕೆ ಬರುತ್ತಾರೆ. ಮಕ್ಕಳು ಆಹಾರ ಚೆಲ್ಲಾಡುತ್ತಾರೆ. ಆ ಆಹಾರವನ್ನು ಹುಡುಕಿಕೊಂಡು ಬಂದ ಹಂದಿ, ನಾಯಿಗಳ ದಂಡೇ ಅಲ್ಲಿರುತ್ತದೆ. ಈಗ ಅದು ಅವುಗಳ ವಾಸಸ್ಥಾನವಾಗಿ ಬದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.