ADVERTISEMENT

ಮಂಡ್ಯ: ವಿವಿಧೆಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 5:12 IST
Last Updated 8 ಜನವರಿ 2014, 5:12 IST

ಮಂಡ್ಯ: ಮನೆ, ನಿವೇಶನ ಹಕ್ಕುಪತ್ರ, ಸ್ಮಶಾನ ಅಭಿವೃದ್ಧಿ, ಉದ್ಯೋಗ ಖಾತ್ರಿ ಕೆಲಸ ಹಾಗೂ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ತಾಲ್ಲೂಕಿನ ಬಸರಾಳು ಹಾಗೂ ಹಳೆಬೂದುನೂರು ಗ್ರಾಮ ಪಂಚಾಯ್ತಿ ಎದುರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ಬಡ ಕೂಲಿಕಾರರ ಕುಟುಂಬಗಳ ವಾಸಕ್ಕೆ ಸ್ವಂತ ಮನೆಯಿಲ್ಲ. ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿ ದೀಪ, ಶವ ಹೂಳಲು ಸ್ಮಶಾನ ಒದಗಿಸಬೇಕು ಎಂದು ಆಗ್ರಹಿಸಿದರು.

ನಿವೇಶನ ರಹಿತರಿಗೆ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ಸರ್ಕಾರದ ಅನುದಾನ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ತಕ್ಷಣ ಕೆಲಸ ಕೊಡಬೇಕು. ಸರ್ಕಾರಿ ಭೂಮಿಯಲ್ಲಿ ವಾಸವಿರುವ ಬಡವರಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.

ಅರ್ಹರಿಗೆ ಪಡಿತರ ಚೀಟಿ ವಿತರಿಸಬೇಕು. ಪೆಟ್ಟಿ ಅಂಗಡಿಗಳಿಗೆ ಜಾಗ ಒದಗಿಸಬೇಕು. ಭ್ರಷ್ಟಾಚಾರ ತಡೆಗಟ್ಟಿ ಕಾರ್ಮಿಕರಿಗೆ ಕೆಲಸ ಒದಗಿಸಬೇಕು ಎಂದು ಆಗ್ರಹಿಸಿದರು.

ಹಳೆಬೂದನೂರು ಗ್ರಾಮದಲ್ಲಿ 198 ಮಾನದ ದಿನಗಳ ಕೂಲಿಯನ್ನು ಆರು ತಿಂಗಳಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ಕೂಡಲೇ ಬಾಕಿ ನೀಡಬೇಕು ಎಂದು ಸಿ.ಕುಮಾರಿ ಒತ್ತಾಯಿಸಿದರು.

ಎಂ.ಪುಟ್ಟಮಾಧು, ದೇವಿ, ಅಬ್ದುಲ್ಲಾ, ವೈ.ಎಸ್.ಯಶೋಧಮ್ಮ, ಪ್ರಮೀಳಾ, ಶಂಕರ್, ಲಕ್ಷ್ಮಿ, ಎಂ.ಬಿ.ಮಂಗಳಮ್ಮ, ಮಂಜುಳ, ಪುಟ್ಟಮ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸಿ. ಕುಮಾರಿ, ಪ್ರೇಮಾ, ಜಯಮಾಲಾ, ಯಶೋಧಮ್ಮ, ಕೃಷ್ಣ, ಪದ್ಮಮ್ಮ, ಹನಮೇಶ್‌್, ನಾಗಮಣಿ ಮತ್ತಿತರರು ಹಳೆಬೂದನೂರು ಗ್ರಾಮದಲ್ಲಿ ಪ್ರತಿಭಟಿಸಿದರು.

ವಿದ್ಯಾರ್ಥಿಗಳ ಪ್ರತಿಭಟನೆ
ಮಂಡ್ಯ: ಇಲ್ಲಿನ ಪೊಲೀಸ್‌ ಕಾಲೊನಿಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಕಾಲೇಜಿನ ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

ಕಾಲೇಜಿಗೆ ಸ್ವಂತ ಕಟ್ಟಡವಿಲ್ಲದ್ದರಿಂದಾಗಿ ಪ್ರೌಢಶಾಲೆಯ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ಕೂಡಲೇ ಸ್ವಂತ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

ಪ್ರಯೋಗಾಲಯವಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗ್ರಂಥಾಲಯ ಸೌಲಭ್ಯವಿಲ್ಲ. ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯಗಳು ಕಾಲೇಜಿಗೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಓದಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ದೂರಿದ್ದಾರೆ.

ಪತ್ರ ಬರೆಯುವ ಚಳವಳಿ ಹಮ್ಮಿಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರಿಗೆ ಪತ್ರ ಬರೆದಿದ್ದೇವು. ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆಗೆ ಪರಿಹಾರ ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಅಖಿಲೇಶ್‌್, ರಜನಿಕಾಂತ್‌್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕೂಲಿಕಾರರಿಂದ ಪ್ರತಿಭಟನೆ
ಮದ್ದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಸದಸ್ಯರು ಮಂಗಳವಾರ ಸಮೀಪದ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರಾಮಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಘೋಷಣೆ ಕೂಗಿದ ಅವರು, ಎರಡು ಗಂಟೆಗೂ ಹೆಚ್ಚು ಕಾಲ ಕಚೇರಿ ಎದುರು ಕುಳಿತು ಧರಣಿ ನಡೆಸಿದರು.

ಸಂಘದ ತಾಲ್ಲೂಕು ಕಾರ್ಯದರ್ಶಿ ಬಿ. ಹನುಮೇಶ ಮಾತನಾಡಿ, ಗ್ರಾಮ ಪಂಚಾಯಿತಿಯ  ಸ್ಮಶಾನಗಳ ಅಭಿವೃದ್ಧಿಗೊಳಿಸಬೇಕು. ಸರ್ಕಾರಿ ಭೂಮಿಯಲ್ಲಿ ವಾಸವಿರುವ ಬಡ ಜನರಿಗೆ ಹಕ್ಕು ಪತ್ರನೀಡಬೇಕು. ನಿವೇಶನರಹಿತ ಜನರಿಗೆ ನಿವೇಶನ ಒದಗಿಸಿ ಮನೆ ಕಟ್ಟಿಕೊಳ್ಳಲು ಹಣ ಮಂಜೂರು ಮಾಡಬೇಕು. ಎಲ್ಲಾ ಕೃಷಿ ಕೂಲಿಕಾರರಿಗೆ ವರ್ಷದಲ್ಲಿ 250ದಿನಗಳ ಕಾಲ ಕೆಲಸ ನೀಡಿ ಪ್ರತಿದಿನಕ್ಕೆ 300ರೂಪಾಯಿ ಕೂಲಿ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಮುಖಂಡರಾದ ಬಿ.ಎ. ಮಧುಕುಮಾರ್, ಮಹದೇವು, ಮುರುಗೇಶ್, ಪ್ರೇಮ, ಸುಮಿತ್ರಮ್ಮ, ನೂರಮೇರಿ, ಫಾತೀಮ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.