ಮಂಡ್ಯ: ತಾಲ್ಲೂಕಿನ ಕೋಣನಹಳ್ಳಿ ಮತ್ತು ಕೋಣನಹಳ್ಳಿ ತಿಟ್ಟು ಎಂ.ಜಿ. ಬಡಾವಣೆಯಲ್ಲಿ ಹಲವು ವರ್ಷಗಳಿಂದ ವಾಸವಿರುವ ಕುಟುಂಬಗಳಿಗೆ ನಿವೇಶನ ಮತ್ತು ಮನೆಯ ಹಕ್ಕುಪತ್ರ ವಿತರಿಸ ಬೇಕು ಎಂದು ಒತ್ತಾಯಿಸಿ ಅಲ್ಲಿನ ನಿವಾಸಿಗಳು ಸೋಮವಾರ ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು.
ನೂರಾರು ಸಂಖ್ಯೆಯಲ್ಲಿದ್ದ ಮಹಿಳೆಯರು ಕಚೇರಿ ಎದುರು ಧರಣಿ ನಡೆಸಿ ತ್ವರಿತ ಗತಿಯಲ್ಲಿ ಹಕ್ಕುಪತ್ರ ವಿತರಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಬಡಾವಣೆಯಲ್ಲಿ ನಿವೇಶನ ರಹಿತರು ಸಾಕಷ್ಟು ಇದ್ದು, ಹಲವು ವರ್ಷಗಳಿಂದ ಒಂದೇ ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸ ಮಾಡುವಂತಾಗಿದೆ. ನಿವೇಶನ ಹಕ್ಕು ಪತ್ರ ನೀಡಲು ಆಗ್ರಹಿಸಿ ಪುನರಾವರ್ತಿತ ಮನವಿಯನ್ನು ಸಲ್ಲಿಸಿದ್ದರೂ ಅವರು ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಮತ್ತು ಅಧಿಕಾರಿಗಳ ವಿಳಂಬದಿಂದಾಗಿ ಇಲ್ಲಿನ ನಿವಾಸಿಗಳ ಹಕ್ಕುಪತ್ರ ಪಡೆಯಬೇಕು ಎಂಬ ಕನಸು ಈಡೇರುತ್ತಿಲ್ಲ. ಅಲ್ಲದೆ, ಕುಡಿಯುವ ನೀರು, ಶೌಚಾಲಯ, ಒಳಚರಂಡಿ ವ್ಯವಸ್ಥೆಯೂ ಇಲ್ಲದೆ ಇನ್ನಿಲ್ಲದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ಉದ್ಯೋಗ ಖಾತರಿ ಯೋಜನೆ ಸೌಲಭ್ಯವೂ ಇಲ್ಲಿನ ನಿವಾಸಿಗಳಿಗೆ ದೊರೆಯುತ್ತಿಲ್ಲ. ಪಂಚಾಯಿತಿ ಈ ಬಡಾವಣೆಯನ್ನು ಕಡೆಗಣಿಸಿದ್ದು, ಇನ್ನಾದರೂ ಇತ್ತ ಗಮನಹರಿಸಿ ಬೇಡಿಕೆಗಳನ್ನು ಈಡೇರಿಸಬೇಕು ಎಮದು ಒತ್ತಾಯಿಸಿದರು.
ಪಡಿತರ ಕಾರ್ಡ್ ವಿತರಿಸಬೇಕು, ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತರಬೇಕು, ಸಮರ್ಪಕವಾಗಿ ಬೀದಿ ದೀಪ ನಿರ್ವಹಣೆ ಮಾಡಬೇಕು ಎಂಬ ಬೇಡಿಕೆಗಳನ್ನು ಅವರು ಈ ಸಂಬಂಧ ನೀಡಿದ ಮನವಿಯಲ್ಲಿ ಉಲ್ಲೇಖಿಸಿದರು.
ಜನವಾದಿ ಮಹಿಳಾ ಸಂಘಟನೆಯ ಸಿ.ಕುಮಾರಿ, ಬೀಡಿ ಕಾರ್ಮಿಕರ ಸಂಘದ ವಿಲಾಯತ್ ಉನ್ನೀಸಾ, ಬಡಾವಣೆಯ ನಿವಾಸಿಗಳಾದ ಶೋಭಾ, ಮಹದೇವಮ್ಮ, ಪ್ರೇಮಾ, ನಿಂಗಮ್ಮ, ಲಕ್ಷ್ಮಮ್ಮ, ಸುಮಿತ್ರಾ ರೇಣುಕಾ, ಮಹಾಲಕ್ಷ್ಮಿ ಮತ್ತಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.