ADVERTISEMENT

ಮಲೆಮಹದೇಶ್ವರ ರಥ: ಅದ್ದೂರಿ ಸ್ವಾಗತಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2012, 5:00 IST
Last Updated 21 ಆಗಸ್ಟ್ 2012, 5:00 IST

ಕೃಷ್ಣರಾಜಪೇಟೆ: ಮಲೆ ಮಹದೇಶ್ವರ ಜಯಂತ್ಯುತ್ಸವದ ಅಂಗವಾಗಿ ತಾಲ್ಲೂಕಿಗೆ ಸೆಪ್ಟೆಂಬರ್ 2ರಂದು ಆಗಮಿಸುತ್ತಿರುವ ಮಲೆಮಹದೇಶ್ವರ ಜ್ಯೋತಿ ಹೊತ್ತ ರಥದ ಸ್ವಾಗತಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯು ಶಾಸಕ ಕೆ.ಬಿ.ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಈಚೆಗೆ ತಾಲ್ಲೂಕಿನ ಅಂಬಿಗರಹಳ್ಳಿಯ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ನಡೆಯಿತು.

ಮಲೆಮಹದೇಶ್ವರರು ತಾಲ್ಲೂಕಿನ ಅಂಬಿಗರಹಳ್ಳಿ ಸಮೀಪದ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಉಳಿದಿದ್ದರು ಎಂಬ ಐತಿಹ್ಯಗಳು ಈ ಭಾಗದಲ್ಲಿ ಪ್ರಚಲಿತದಲ್ಲಿವೆ. ಈ ಹಿನ್ನೆಲೆಯಲ್ಲಿ ಮಹದೇಶ್ವರ ಜ್ಯೋತಿ ರಥವು ತಾಲ್ಲೂಕಿನಲ್ಲಿ ಸಂಚರಿಸಲಿದೆ. ತಾಲ್ಲೂಕಿನ ಐಪನಹಳ್ಳಿ ಬಳಿ ಸೆ.2ರಂದು ರಥವನ್ನು ಅದ್ದೂರಿಯಾಗಿ ಸ್ವಾಗತಿಸಬೇಕು.
 
ಅಂದು ರಾತ್ರಿ ತ್ರಿವೇಣಿ ನದಿಗಳ ಸಂಗಮ ಕ್ಷೇತ್ರದಲ್ಲಿ ಜ್ಯೋತಿ ಉಳಿಯಲಿದ್ದು, ಇಡೀ ರಾತ್ರಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನಂತರ ಸೆ.3ರಂದು ಪಾಂಡವಪುರ ತಾಲ್ಲೂಕಿಗೆ ತೆರಳುವ ಜ್ಯೋತಿನ್ನು ತಾಲ್ಲೂಕಿನ ಗಡಿಯಲ್ಲಿ ಬೀಳ್ಕೊಡುವುದು ಎಂದು ತೀರ್ಮಾನಿಸಲಾಯಿತು.

ಬಾಳೆಹೊನ್ನೂರು ರಂಭಾಪುರಿ ಮಠದ ತೆಂಡೆಕೆರೆ ಶಾಖೆಯ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಸಭೆಯ ಸಾನ್ನಿಧ್ಯ ವಹಿಸಿದ್ದರು. ಸಂಸದ ಎಚ್.ವಿಶ್ವನಾಥ್, ವಿಧಾನಸಭೆ ಮಾಜಿ ಅಧ್ಯಕ್ಷ ಕೃಷ್ಣ, ಜಯಂತ್ಯುತ್ಸವ ಆಚರಣಾ ಸಮಿತಿ ಅಧ್ಯಕ್ಷ ಡಿ.ಮಾದೇಗೌಡ, ತಹಶೀಲ್ದಾರ್ ಡಾ.ಎಚ್.ಎಲ್.ನಾಗರಾಜ್ ಇತರರು ಇದ್ದರು.

 ಜ್ಯೋತಿ ಸ್ವಾಗತ ಸಮಿತಿ ಅಧ್ಯಕ್ಷರಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂ.ಚಿ.ಸಣ್ಣಸ್ವಾಮಿಗೌಡ, ಕಾರ್ಯಾಧ್ಯಕ್ಷರಾಗಿ ಡಾ.ಎಂ.ಬಿ.ಗೌಡ, ಗೌರವಾಧ್ಯಕ್ಷರಾಗಿ ನಿವೃತ್ತ ಎಂಜಿನಿಯರ್ ನಾಗರಾಜು ಅವರನ್ನು ಸಭೆ ಆಯ್ಕೆ ಮಾಡಲಾಯಿತು.

`ನೇಕಾರರು ಸಂಘಟಿತರಾಗಿ~
ಸಾಮಾಜಿಕವಾಗಿ ಹಿಂದುಳಿದಿರುವ ನೇಕಾರರು ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಸಂಘಟಿತ ಪ್ರಯತ್ನ ನಡೆಸಬೇಕು ಎಂದು ವಾಣಿಜ್ಯೋದ್ಯಮಿ ಜಿ.ಸೋಮಶೇಖರ್ ತಿಳಿಸಿದರು.

ತಾಲ್ಲೂಕಿನ ಹೊಸಹೊಳಲು ಗ್ರಾಮದ ಲಕ್ಷ್ಮೀನಾರಾಯಣ ನೇಯ್ಗೆಯವರ ಸಹಕಾರ ಸಂಘದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಜನಾಂಗದ ಯುವಕರು ಕೀಳರಿಮೆ ಬಿಟ್ಟು, ಸಂಘಟನಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಎಚ್.ಆರ್.ಲೋಕೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಖಾದಿ ಮಂಡಲಿ ಮಾಜಿ ಅಧ್ಯಕ್ಷ ಡಾ.ಶ್ರೀನಿವಾಸಶೆಟ್ಟಿ, ಮುಖಂಡರಾದ ವೆಂಕಟಶೆಟ್ಟಿ, ಎಚ್.ಟಿ.ರಾಜು, ಕುಮಾರಣ್ಣ, ಶಿವರಾಂ ಶೆಟ್ಟಿ, ರಂಗಸ್ವಾಮಿ, ನರೇಂದ್ರಬಾಬು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.