ADVERTISEMENT

ಮಳೆಯಲ್ಲೇ ನಟಿ ಶ್ರುತಿ ರೋಡ್‌ ಷೋ

​ಪ್ರಜಾವಾಣಿ ವಾರ್ತೆ
Published 9 ಮೇ 2018, 13:20 IST
Last Updated 9 ಮೇ 2018, 13:20 IST
ಮಂಡ್ಯದ ವಿವಿಧೆಡೆ ಮಂಗಳವಾರ ಚಿತ್ರ ನಟಿ ಶ್ರುತಿ ಬಿಜೆಪಿ ಅಭ್ಯರ್ಥಿ ಎನ್‌.ಶಿವಣ್ಣ ಪರ ಪ್ರಚಾರ ನಡೆಸಿದರು
ಮಂಡ್ಯದ ವಿವಿಧೆಡೆ ಮಂಗಳವಾರ ಚಿತ್ರ ನಟಿ ಶ್ರುತಿ ಬಿಜೆಪಿ ಅಭ್ಯರ್ಥಿ ಎನ್‌.ಶಿವಣ್ಣ ಪರ ಪ್ರಚಾರ ನಡೆಸಿದರು   

‌ಮಂಡ್ಯ: ನಗರದಲ್ಲಿ ಮಂಗಳವಾರ ಸಂಜೆ ಸುರಿಯುತ್ತಿದ್ದ ಮಳೆಯ ನಡುವೆಯೇ ಬಿಜೆಪಿ ನಾಯಕಿ, ಚಲನಚಿತ್ರ ನಟಿ ಶ್ರುತಿ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಎನ್‌.ಶಿವಣ್ಣ ಪರ ರೋಡ್‌ ಷೋ ನಡೆಸಿ ಮತಯಾಚನೆ ಮಾಡಿದರು.

‘ಮಹಿಳೆಯರ ರಕ್ಷಣೆ, ಜಿಲ್ಲೆಯ ಅಭಿವೃದ್ಧಿ ಹಾಗೂ ನವ ಕರ್ನಾಟಕ ನಿರ್ಮಾಣಕ್ಕೆ ಬಿಜೆಪಿ ಬೆಂಬಲಿಸಬೇಕು. ಸರಳ ಹಾಗೂ ಸೌಮ್ಯ ಸ್ವಭಾವದ ಶಿವಣ್ಣ ಅವರು ಮಂಡ್ಯ ಕ್ಷೇತ್ರದಲ್ಲಿ ಗೆದ್ದು ಇತಿಹಾಸ ನಿರ್ಮಿಸಲಿದ್ದಾರೆ. ಕಮಲ ಅರಳುವುದು ಕೆಸರಿನಲ್ಲಿಯೇ ಹೊರತು, ಬಂಗಾರ ಹಾಗೂ ಬೆಳ್ಳಿಯ ಬಟ್ಟಲಿನಲ್ಲಿ ಅರಳುವುದಿಲ್ಲ. ಪ್ರಾಮಾಣಿಕವಾಗಿ ಜನರ ನೋವಿಗೆ ಸ್ಪಂದಿಸುತ್ತಾ, ಅವರ ನಿರೀಕ್ಷೆಗಳನ್ನು ಈಡೇರಿಸುವ ಸಲುವಾಗಿ ಶಿವಣ್ಣ ಕಂಕಣಬದ್ಧರಾಗಿದ್ದಾರೆ. ಶಿವಣ್ಣ ಗೆದ್ದರೆ ಮೈಷುಗರ್‌ ಕಾರ್ಖಾನೆಗೆ ಅಧ್ಯಕ್ಷರನ್ನಾಗಿ ಮಾಡುವುದಾಗಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಆ ಮೂಲಕ ಶಿವಣ್ಣ ರೈತರ ಸೇವೆ ಮಾಡುತ್ತಾರೆ’ ಎಂದು ಹೇಳಿದರು.

‘ಕೇವಲ 3 ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು ಈಗ ಕರ್ನಾಟಕದಲ್ಲಿ ಕಣ್ಮರೆಯಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಚುನಾವಣೆಯಲ್ಲಿ ಪಾಲ್ಗೊಂಡಿರುವುದು ಯುವಕರಿಗೆ ಪ್ರೇರಣೆ ನೀಡಿದೆ. ಹೀಗಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವಾಗಲು ಬಿಜೆಪಿ ಶಾಸಕರನ್ನು ಆರಿಸಿ ಕಳಿಸಬೇಕಾಗಿದೆ. ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರ ಕನಸು ನವ ಕರ್ನಾಟಕ ನಿರ್ಮಾಣ ಮಾಡುವುದಾಗಿದೆ’ ಎಂದು ಹೇಳಿದರು.

ADVERTISEMENT

ಅಭ್ಯರ್ಥಿ ಚಂದಗಾಲು ಎನ್.ಶಿವಣ್ಣ, ನಗರ ಘಟಕ ಅಧ್ಯಕ್ಷ ಅರವಿಂದ್, ಮುಖಂಡರಾದ ಬಸವೇಗೌಡ, ವಸಂತ್‌ಕುಮಾರ್, ಡಾ.ಸದಾನಂದ ಇದ್ದರು.

ಹೋರಾಟಗಾರರಿಗೆ ಗೌರವ ನೀಡಿ; ಶ್ರುತಿ

ಶ್ರೀರಂಗಪಟ್ಟಣ: ‘35 ವರ್ಷಗಳಿಂದ ರೈತ ಪರ ಹೋರಾಟ ನಡೆಸುತ್ತಿರುವ ಕೆ.ಎಸ್‌.ನಂಜುಂಡೇಗೌಡ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಅವರನ್ನು ಗೆಲ್ಲಿಸುವ ಮೂಲಕ ಮತದಾರರು ಹೋರಾಟಗಾರರಿಗೆ ಗೌರವ ಕೊಡಬೇಕು’ ಎಂದು ಚಿತ್ರನಟಿ ಶ್ರುತಿ ಮನವಿ ಮಾಡಿದರು.

ಪಟ್ಟಣದಲ್ಲಿ ಮಂಗಳವಾರ ಕೆ.ಎಸ್‌.ನಂಜುಂಡೇಗೌಡ ಪರ ಚುನಾವಣಾ ಪ್ರಚಾರ ನಡೆಸಿ ಅವರು ಮಾತನಾಡಿದರು. ‘ರಾಜಕಾರಣವನ್ನು ಉದ್ಯಮ ಮಾಡಿಕೊಂಡಿರುವ ಜನರ ಬಗ್ಗೆ ಮತದಾರರು ಎಚ್ಚರದಿಂದ ಇರಬೇಕು. ಅಂಥ ವ್ಯಕ್ತಿಗಳಿಂದ ಜನರ ಕಲ್ಯಾಣ ಅಸಾಧ್ಯ. ಸಮಾಜದ ನಾಡಿಮಿಡಿತ ಅರಿತಿರುವ ವ್ಯಕ್ತಿಯನ್ನು ಬೆಂಬಲಿಸಬೇಕು. ಕೆ.ಎಸ್‌.ನಂಜುಂಡೇಗೌಡ ತಮ್ಮ ಜನರ ಕಾಳಜಿಯಿಂದಾಗಿ ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿದ್ದಾರೆ. ಅವರಿಗೆ ಮೋಸ ಮಾಡಬೇಡಿ’ ಎಂದರು.

ಕೆ.ಎಸ್‌.ನಂಜುಂಡೇಗೌಡ ಮಾತನಾಡಿ, ‘ಪಕ್ಷದ ಕಾರ್ಯಕರ್ತರು ಮತದಾನದ ದಿನ ಕೊನೆಯ ಕ್ಷಣದ ವರೆಗೆ ಮೈಮರೆಯದೆ ಎಚ್ಚರ ವಹಿಸಬೇಕು’ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಕೆ.ಬಲರಾಂ, ರಾಜ್ಯ ಸಮಿತಿ ಸದಸ್ಯರಾದ ಉಮಾಶಂಕರ್‌, ಮಹದೇವು, ಕ್ಷೇತ್ರ ಘಟಕದ ಅಧ್ಯಕ್ಷ ಟಿ.ಶ್ರೀಧರ್‌, ಪುರಸಭೆ ಮಾಜಿ ಸದಸ್ಯೆ ವಿದ್ಯಾ ಉಮೇಶ್‌, ನಗರ ಘಟಕದ ಅಧ್ಯಕ್ಷ ಪುಟ್ಟರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.