ಮಂಡ್ಯ: ಅದೊಂದು ಸರಳ ವಿವಾಹ. ವರನಿಗೆ ಕಾಲು ಬಹುತೇಕ ಊನವಾಗಿತ್ತು. ವಧುವಿಗೆ ಅಂಶಿಕ ಅಂದರೆ ಶೇಕಡ 10ರಷ್ಟು ದೃಷ್ಟಿ ಸಮಸ್ಯೆ. ಆದರೆ, ಇಬ್ಬರಿಗೂ ಜೀವನೋತ್ಸಾಹವಿತ್ತು.
ಹಿರಿಯರ ಸಮ್ಮತಿ, ಉಪಸ್ಥಿತಿಯಲ್ಲಿ ಇಬ್ಬರು ಸರಳವಾಗಿ ವಿವಾಹವಾಗುವ ಮೂಲಕ ಹೊಸ ಬದುಕಿಗೆ ಅಡಿ ಇಟ್ಟರು. ನಗರದ ಎಂ.ಒ.ಬಿ. ಗ್ರಾಮೀಣ ಆರೋಗ್ಯ ಕೇಂದ್ರ ಮತ್ತು ಅಶ್ರಯ ಮಹಿಳಾ ಒಕ್ಕೂಟ ಜಂಟಿಯಾಗಿ ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಇದಕ್ಕೆ ವೇದಿಕೆ.
ತಾಲ್ಲೂಕಿನ ಶಿವಳ್ಳಿಯಲ್ಲಿ ಸ್ಟೌ ದುರಸ್ತಿ ಮಾಡುವ ಅಂಗಡಿಯನ್ನು ನಡೆಸುತ್ತಿರುವ ಬೋರೇಗೌಡ ಮತ್ತು ಎಂ.ಹೊಸಹಳ್ಳಿ ಗ್ರಾಮದ ನಿವಾಸಿ ಶಿವರತ್ನ ಹೀಗೆ ಸರಳ ಮದುವೆಯಾದ ನವ ದಂಪತಿ.
ಎರಡೂ ಕಾಲುಗಳು ಊನಗೊಂಡಿದ್ದರೆ, ಯುವತಿಗೆ ಅಲ್ಪಪ್ರಮಾಣದಲ್ಲಿ ದೃಷ್ಟಿ ದೋಷವಿದೆ ಎಂಬುದು ಅಂಗವಿಕಲರ ಸಂಘದ ಅಧ್ಯಕ್ಷ ಚಲುವರಾಜು ಅವರ ವಿವರಣೆ. ಮದುವೆಗೆ ಉಭಯ ಕುಟುಂಬದ ಹಿರಿಯರು ಅಸ್ತು ಎಂದಿದ್ದು, ಮಹಿಳಾ ದಿನಾಚರಣೆ ಸಮಾರಂಭದಲ್ಲಿಯೇ ಮದುವೆ ಆಗುವ ಮೂಲಕ ಸರಳ ವಿವಾಹದ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದರು.
ಎಂಒಬಿ ಸ್ವಯಂ ಸೇವಾ ಸಂಘದ ಸಿಸ್ಟರ್ ಲೀಲಾ ಅವರು ತಾಳಿ ಮತ್ತು ಬಟ್ಟೆಯನ್ನು ಕೊಡುಗೆ ನೀಡಿದರೆ; ಸಂಘವೇ ಊಟದ ವ್ಯವಸ್ಥೆಯನ್ನು ಮಾಡಿತ್ತು. ಸಿಸ್ಟರ್ ಸ್ಟೆಲ್ಲಾ, ಫಾ. ಎಂ.ಟಿ.ಜೋಸೆಫ್, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ ಜೋಸೆಫ್ ಅವರೂ ಈ ಸಂದರ್ಭದಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.