ಮೇಲುಕೋಟೆ: ಮೇಲುಕೋಟೆ ಚಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ಮಾರ್ಚ್ 26ರಂದು ನಡೆಯಲಿದೆ. ಪೂರ್ವಭಾವಿಯಾಗಿ ಶುಕ್ರವಾರ ಗರುಡ ಧ್ವಜಾರೋಹಣ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಹತ್ತು ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸುವ ಸಂಕೇತವಾಗಿ ಚಿನ್ನದ ಧ್ವಜಸ್ತಂಭದ ಮೇಲೆ ಗರುಡ ಪಟ ಏರಿಸಲಾಯಿತು. ಮಾರ್ಚ್ 26ರಂದು ರಾತ್ರಿ 8 ಗಂಟೆಗೆ ಚೆಲುವನಾರಾಯಣಸ್ವಾಮಿಗೆ ವೈರಮುಡಿ ಧಾರಣೆ ಮಾಡಲಾಗುತ್ತದೆ. ಮಾರ್ಚ್ 28ರಂದು ಗಜೇಂದ್ರಮೋಕ್ಷ, ಗಜ ಮತ್ತು ಅಶ್ವವಾಹನೋತ್ಸವ ನಡೆಯಲಿವೆ. ಮಾರ್ಚ್ 29ರಂದು ಮಹಾರಥೋತ್ಸವ, ಬಂಗಾರದ ಪಲ್ಲಕ್ಕಿ ಸೇವೆ ನಡೆಯಲಿವೆ. ಮಾರ್ಚ್ 30ರಂದು ರಾತ್ರಿ ಚೆಲುವನಾರಾಯಣನಿಗೆ ರಾಜಮುಡಿ ಧಾರಣೆ, ತೆಪ್ಪೋತ್ಸವ ನಡೆಯಲಿದೆ. 31ರಂದು ಸಂಧಾನಸೇವೆ, ಕಲ್ಯಾಣಿಯಲ್ಲಿ ತೀರ್ಥಸ್ನಾನ ನಡೆಯಲಿದೆ.
ಜಾತ್ರೆಗೆ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಖಜಾನೆಯಲ್ಲಿರುವ ವೈರಮುಡಿ ಮತ್ತು ರಾಜಮುಡಿ ವಜ್ರಖಚಿತ ಕಿರೀಟಗಳನ್ನು ಮಾರ್ಚ್ 26ರಂದು ಬೆಳಿಗ್ಗೆ 6.30ಕ್ಕೆ ಹೊರತೆಗೆದು ಮಂಡ್ಯದ ಲಕ್ಷ್ಮಿಜನಾರ್ದನ ದೇಗುಲದಲ್ಲಿ ಪ್ರಥಮ ಪೂಜೆ ನೆರವೇರಿಸಿ ಮೇಲುಕೋಟೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುತ್ತದೆ. ಮಾರ್ಗ ಮಧ್ಯದ ಹಳ್ಳಿಗಗಳ ಜನರು ಎರಡೂ ಕಿರೀಟಗಳಿಗೆ ಸ್ವಾಗತ ಕೋರಿ, ಪೂಜೆ ಸಲ್ಲಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.