ADVERTISEMENT

ಮೇಳೈಸಿದ ಗ್ರಾಮೀಣ ಸಂಸ್ಕೃತಿ

ಜಿಲ್ಲಾ ಯುವಜನ ಮೇಳ: ರಂಜಿಸಿದ ವೀರಗಾಸೆ, ಡೊಳ್ಳುಕುಣಿತ, ರಂಗಗೀತೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2014, 7:16 IST
Last Updated 24 ಫೆಬ್ರುವರಿ 2014, 7:16 IST
ಮಳವಳ್ಳಿಯ ಕೋರೆಗಾಲ ಕಲಾವಿದರು ಪೂಜಾಕುಣಿತ ಪ್ರದರ್ಶಿಸಿದರು.
ಮಳವಳ್ಳಿಯ ಕೋರೆಗಾಲ ಕಲಾವಿದರು ಪೂಜಾಕುಣಿತ ಪ್ರದರ್ಶಿಸಿದರು.   

ಪಾಂಡವಪುರ: ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಫೆ. 22, 23 ರಂದು ನಡೆದ ‘ಜಿಲ್ಲಾ ಯುವಜನ ಮೇಳ’ದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಯುವಕ–ಯುವತಿಯರು ತಮ್ಮ ಸಾಂಸ್ಕೃತಿಕ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಜಿಲ್ಲಾ ಯುವ ಪರಿಷತ್ ಹಾಗೂ ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಮತ್ತು ಭಾನುವಾರ ‘ಜಿಲ್ಲಾ ಯುವಜನ ಮೇಳ 2013–14, ರಾಷ್ಟ್ರೀಯ ಯುವ ನೀತಿ 2014, ರಾಜೀವ್ ಗಾಂಧಿ ಖೇಲ್ ಅಭಿಯಾನ ಜಾಗೃತಿ ಕಾರ್ಯಕ್ರಮ’ ಜರುಗಿತು.

ತಾಲ್ಲೂಕು ಮಟ್ಟದ ಯುವಜನ ಮೇಳದಲ್ಲಿ ಆಯ್ಕೆಯಾಗಿದ್ದ ಯುವಕ ಮತ್ತು ಯುವತಿಯರು ಜಿಲ್ಲಾ ಮೇಳದಲ್ಲಿ ಭಾಗವಹಿಸಿ, ಭಾವಗೀತೆ, ಲಾವಣಿ, ರಂಗಗೀತೆ, ಗೀಗೀ ಪದ, ಜನಪದ ಸಮೂಹ ಗೀತೆ, ಭಜನೆ ಹಾಡಿದರು. ಹೆಣ್ಣುಮಕ್ಕಳು ರಾಗಿ ಬೀಸುವ ಪದ ಹಾಡಿ ರಂಜಿಸಿದರು. ಸೀರೆಯುಟ್ಟ ಯುವತಿಯರು ಎಲೆ ಅಡಿಕೆ ಮೇಯುತ್ತ, ತಲೆದೂಗುತ್ತಾ, ಸೋಬಾನೆ ಪದಗಳನ್ನು ಹಾಡುವ ಮೂಲಕ ಹಳ್ಳಿಗಳಲ್ಲಿ ನಡೆಯುವ ಮದುವೆ ಸಂಭ್ರಮವನ್ನು ಕಟ್ಟಿಕೊಟ್ಟರು.

ವೀರಗಾಸೆ, ಡೊಳ್ಳುಕುಣಿತ, ಪೂಜಾಕುಣಿತಗಳು ಜನಪದ ನೃತ್ಯಗಳು ನೋಡುಗರಿಗೆ ರೋಮಾಂಚನ ಉಂಟುಮಾಡಿದರೆ, ಚರ್ಮವಾದ್ಯ ಮೇಳದ ಬಡಿತ ಕುಣಿತದಿಂದಾಗಿ ಸೇರಿದ್ದ ಜನರು ಕುಂತಲ್ಲಿಯೇ ಕುಣಿಯುತ್ತ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಮಂಡ್ಯದ ಇಂಡವಾಳು ಕಲಾವಿದರು ಮರಗಾಲಿನ ಪೂಜಾಕುಣಿತದಲ್ಲಿ ಮಂಡಿಯೂರಿ ನೆಲದ ಮೇಲಿಟ್ಟಿದ್ದ ನೋಟುಗಳನ್ನು ಕಣ್ಣಿನ ರೆಪ್ಪೆಯಿಂದ ಎತ್ತಿ ಕುಣಿದರು. ನಂದಿಕಂಬ ಹೊತ್ತವರು ಇದಕ್ಕೆ ಸಾಥ್ ನೀಡಿ ಕುಣಿದಾಗ ಜನರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಮಳವಳ್ಳಿಯ ಕೋರೆಗಾಲದ ಕಲಾವಿದರ ಪೂಜಾಕುಣಿತ, ಶ್ರೀರಂಗಪಟ್ಟಣದ ಕೋಡಿಯಾಲದ ಯುವತಿಯರ ಪೂಜಾ ಕುಣಿತ ಮೇಳಕ್ಕೆ ಮೆರುಗು ನೀಡಿದವು.

ಜಾನಪದ ತಜ್ಞೆ ಡಾ.ಸೀತಾಪುರ ಜಯಲಕ್ಷ್ಮಿ ಅವರು ಹಾಡಿದ ಗ್ರಾಮೀಣ ಸೊಗಡಿನ ಜನಪದ ಗೀತೆ,  ಹುರುಗಲವಾಡಿ ರಾಮಯ್ಯನವರು ಹಾಡಿದ ಪರಿಸರದ ಹಾಡು, ಕೆರೆತೊಣ್ಣೂರು ಹಿರಿಯ ಕಲಾವಿದ ಶಿವಣ್ಣೇಗೌಡ ಅವರು ಹಾಡಿದ ತತ್ವ ಪದಗಳು,  ಕವಯಿತ್ರಿ ಟಿ.ಆರ್. ಪೂರ್ಣಿಮಾ ಅವರ ನಿರೂಪಣೆಯಲ್ಲಿ ಯುವಕ, ಯುವತಿಯರು ಹಾಡಿದ ದೇಶಭಕ್ತಿ ಸಾರುವ ಯುವ ನಮನ ಗೀತೆಗಳು, ಕಲಾವಿದ ಲಾಲಿಪಾಳ್ಯ ಮಹಾದೇವು ಅವರ ಏಕಪಾತ್ರಾಭಿನಯ ಯುವಜನ ಮೇಳದಲ್ಲಿ ಗಮನ ಸೆಳೆದವು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಎ.ಎಲ್. ಕೆಂಪೂಗೌಡ, ವಿ. ವಸಂತಪ್ರಕಾಶ್,  ಮಾಜಿ ಸದಸ್ಯ ಕೆ.ಟಿ. ಗೋವಿಂದೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಕೆ. ಗೌಡೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಷಕಂಠೇಗೌಡ, ಉಪಾಧ್ಯಕ್ಷೆ ಪದ್ಮಮ್ಮ, ತಹಶೀಲ್ದಾರ್ ಡಿ.ಎಸ್. ಶಿವಕುಮಾರಸ್ವಾಮಿ, ನೆಹರೂ ಯುವ ಕೇಂದ್ರದ ಅಧಿಕಾರಿ ಎಸ್. ಸಿದ್ದರಾಮಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ.ಎಚ್.ಪಿ. ಮಂಜುಳಾ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾಡೇನಹಳ್ಳಿ ನಾಗಣ್ಣಗೌಡ, ಮಳವಳ್ಳಿ ನಾಗರಾಜು, ಕವಯತ್ರಿ ಪೂರ್ಣಿಮಾ, ಜಾನಪದ ತಜ್ಞೆ ಡಾ.ಜಯಲಕ್ಷ್ಮೀ ಸೀತಾಪುರ, ಕಲಾವಿದ ಹುರುಗಲ­ವಾಡಿ ರಾಮಯ್ಯ, ಬಿಇಒ ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.