ADVERTISEMENT

ಮೈಷುಗರ್: ಜುಲೈ ಮೊದಲ ವಾರದಲ್ಲಿ ಕಾರ್ಖಾನೆ ಆರಂಭ

​ಪ್ರಜಾವಾಣಿ ವಾರ್ತೆ
Published 16 ಜೂನ್ 2012, 9:15 IST
Last Updated 16 ಜೂನ್ 2012, 9:15 IST

ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆಯ (ಮೈಷುಗರ್) 77 ಸಾವಿರ ಕ್ವಿಂಟಲ್ ಸಕ್ಕರೆ ಮಾರಾಟಕ್ಕೆ ಹೈಕೋರ್ಟ್‌ನಿಂದ ಆದೇಶ ತರಲಾ ಗಿದ್ದು, ಸಕ್ಕರೆ ಮಾರಾಟದಿಂದ ಬರುವ ಹಣವನ್ನು ಜೂ.25 ರಿಂದ ರೈತರ 23 ಕೋಟಿ ರೂಪಾಯಿ ಬಿಲ್ ಬಾಕಿ ಪಾವತಿಸಲು ಬಳಸಿಕೊಳ್ಳಲಾಗುವುದು ಎಂದು ಮೈಷುಗರ್ ಅಧ್ಯಕ್ಷ ನಾಗರಾಜಪ್ಪ ಹೇಳಿದರು.

ಕಾರ್ಖಾನೆಯಲ್ಲಿರುವ ಸಕ್ಕರೆಯ ಆಧಾರದ ಮೇಲೆ ಸಕ್ಕರೆ ನಿರ್ದೇಶನಾಲಯವು ಮಾರಾಟಕ್ಕೆ ಅನುಮತಿ ನೀಡುತ್ತದೆ. ಆದರೆ ನಾಲ್ಕು ತಿಂಗಳಿನಿಂದ ಮೈಷುಗರ್‌ಗೆ ಅನುಮತಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದೇವು. ಕಾರ್ಖಾನೆಯ ಆರ್ಥಿಕ ಸ್ಥಿತಿ ಆಧಾರದ ಮೇಲೆ ನ್ಯಾಯಾಲಯ ಅನುಮತಿ ನೀಡಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಕಾರ್ಖಾನೆಯಲ್ಲಿ ಇನ್ನು 1.10 ಲಕ್ಷ ಕ್ವಿಂಟಲ್‌ನಷ್ಟು ಸಕ್ಕರೆ ಇದೆ. ಇದನ್ನು ಮಾರಾಟ ಮಾಡಿದ ನಂತರ ಮತ್ತೆ ಅವಕಾಶ ನೀಡವುದಾಗಿ ನ್ಯಾಯಾಲಯ ತಿಳಿಸಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆಯ ಸಕ್ಕರೆ ಮಾರಟಕ್ಕೂ ಅನುಮತಿ ಕೋರಿ ನ್ಯಾಯಾಲಯ ವೆುಟ್ಟಿಲು ಏರಲಾಗಿದೆ. ವಾರದಲ್ಲಿ ಆದೇಶ ಸಿಗುವ ಭರವಸೆ ಇದ್ದು, ನಂತರ ಆ ಕಾರ್ಖಾನೆಯ ರೈತರ ಬಿಲ್ ಸಹ ಪಾವತಿಸಲಾಗುವುದು ಎಂದರು.

ಯಾವ ಕಾರಣಕ್ಕೆ ಸಕ್ಕರೆ ನಿರ್ದೇಶನಾಲಯ ಅನುಮತಿ ನೀಡಲಿಲ್ಲ ಎಂಬುದು ಗೊತ್ತಾಗಿಲ್ಲ. ರೈತರ ಸಂಕಷ್ಟು ನೋಡಲಾಗದೇ ನ್ಯಾಯಾಲಯದ ವೆುಟ್ಟಿಲು ಏರಬೇಕಾಯಿತು ಎಂದು ಹೇಳಿದರು.

ಪಾಂಡವಪುರ ಸಕ್ಕರೆ ಕಾರ್ಖಾನೆಯಲ್ಲಿ ಜೂ.25ರ ನಂತರ ಹಾಗೂ ಮೈಷುಗರ್ ಕಾರ್ಖಾನೆಯಲ್ಲಿ ಜು.1 ರಿಂದ ಕಬ್ಬು ಅರೆಯುವುದಕ್ಕೆ ಆರಂಭಿಸಲಾಗುವುದು. ಜುಲೈ ಅಂತ್ಯಕ್ಕೆ ಕೋ-ಜನ್ ಆರಂಭವಾಗಲಿದೆ ಎಂದು ತಿಳಿಸಿದರು.

2009-10ರಿಂದ ಇಲ್ಲಿಯವರೆಗೆ ರಾಜ್ಯ ಸರ್ಕಾರ 158 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಹುಡ್ಕೊ ಸಾಲ ಪಾವತಿಗೆ 68.69 ಕೋಟಿ ರೂ, ಡಿಬೆಂಚರ್‌ಗೆ 16.16 ಕೋಟಿ ರೂ, 18.18 ಕೋಟಿ ರೂ ರೈತರ ಹಣ ಪಾವತಿಗೆ, ಮಿಲ್ ಹಾಗೂ ಬಾಯ್ಲಿಂಗ್ ಸುಧಾರಣೆಗಾಗಿ 40 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಹೇಳಿದರು. ಪ್ರಧಾನ ನಿರ್ದೇಶಕ ಬಾಲಸುಬ್ರಮಣ್ಯಂ, ಅಕೌಂಟ್ ಮ್ಯಾನೇಜರ್ ನರೇಂದ್ರ ಉಪಸ್ಥಿತರಿದ್ದರು.

ಮೈಷುಗರ್: ಶ್ವೇತಪತ್ರಕ್ಕೆ ಆಗ್ರಹ

ಮೈಸೂರು ಸಕ್ಕರೆ ಕಂಪೆನಿ (ಮೈಷುಗರ್) ಕಾರ್ಖಾನೆ ಆರ್ಥಿಕ ಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕು ಮತ್ತು ಕಂಪೆನಿಗೆ ಕಾಯಂ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಸರ್ಕಾರವನ್ನು ಆಗ್ರಹಪಡಿಸಿದರು.

ಮೈಷುಗರ್ ಕಾರ್ಖಾನೆ ರೋಗಗ್ರಸ್ತ ಸ್ಥಿತಿಯಲ್ಲಿದೆ. ರೈತರಿಗೆ ಸಕಾಲದಲ್ಲಿ ಹಣ ಪಾವತಿ ಮಾಡುತ್ತಿಲ್ಲ. ಅಲ್ಲಿನ ವಾಸ್ತವ ಸ್ಥಿತಿ ಹೇಗಿದೆ ಎಂಬುದರ ಬಗೆಗೆ ಜನರಿಗೆ ಮಾಹಿತಿ ನೀಡುವ ದೃಷ್ಟಿಯಿಂದ ಸರ್ಕಾರ ಈ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾರ್ಖಾನೆಯಲ್ಲಿ ಒಬ್ಬರೇ ನಾಲ್ಕೈದು ಹುದ್ದೆಗಳನ್ನು ನಿಭಾಯಿಸುತ್ತಿದ್ದು, ಆಡಳಿತದ ಮೇಲೆ ಅಡ್ಡ ಪರಿಣಾಮ ಬೀರಿದೆ. ಕೆಲ ವರ್ಷಗಳಿಂದ ವ್ಯವಸ್ಥಾಪಕ ಹುದ್ದೆಯೂ ಖಾಲಿ ಇದ್ದು, ಕೂಡಲೇ ನೇಮಕ ಆಗಬೇಕಿದೆ ಎಂದು ಅವರು ಹೇಳಿದರು.

ಕೆಪಿಸಿಸಿ ಸದಸ್ಯ ಸಿ.ಡಿ.ಗಂಗಾಧರ್ ಮಾತನಾಡಿ, `ಕಾರ್ಖಾನೆಗೆ ಮೊದಲು ಕಬ್ಬು ಪೂರೈಸಿದ ರೈತರಿಗೆ, ಮೊದಲು ಹಣ ಪಾವತಿ ಮಾಡುತ್ತಿಲ್ಲ. ಕಾರ್ಖಾನೆ ಅಧ್ಯಕ್ಷರು, ಇಷ್ಟ ಬಂದವರಿಗೆ ಹಣ ಕೊಡಿಸುತ್ತಾ, ತಾರತಮ್ಯವನ್ನು ಮಾಡುತ್ತಿದ್ದಾರೆ. ಯಾವುದೇ ಮಾನದಂಡ ಅನುಸರಿಸುತ್ತಿಲ್ಲ~ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.