ಮಂಡ್ಯ: ವೇಶ್ಯಾವಾಟಿಕೆ ಆರೋಪದ ಮೇಲೆ ಮದ್ದೂರು ಪಟ್ಟಣದ ಪ್ರಕೃತಿ ವಸತಿ ಗೃಹದಲ್ಲಿ ರಕ್ಷಣೆ ಮಾಡಲಾದ ಮೂವರು ಯುವತಿಯರನ್ನು ಕೊಠಡಿಯೊಳಗೆ ಗುಹೆ ಮಾದರಿಯ ಸ್ಥಳ ನಿರ್ಮಿಸಿ ಬಚ್ಚಿಟ್ಟಿದ್ದ ವಿಷಯ ಬೆಳಕಿಗೆ ಬಂದಿದೆ.
ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿರುವ ವಸತಿ ಗೃಹಕ್ಕೆ ಪೊಲೀಸರು ಗುರುವಾರ ಸಂಜೆ ದಾಳಿ ನಡೆಸಿದ್ದರು. ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಸಿಬ್ಬಂದಿ ಸಹಾಯದೊಂದಿಗೆ ಪೊಲೀಸರು ಲಾಡ್ಜ್ ಪರಿಶೀಲನೆ ನಡೆಸಿದರು. ಆರಂಭದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಯಾವುದೇ ಕುರುಹು ಕಂಡು ಬರಲಿಲ್ಲ. ಸತತ 5 ಗಂಟೆಗಳ ಕಾಲ ಹುಡುಕಾಟ ನಡೆಸಿದ ಪೊಲೀಸರು ವಸತಿ ಗೃಹದ ಒಂದು ಕೊಠಡಿಯಲ್ಲಿ ಬಿಯರ್ ಬಾಟಲಿ ಹಾಗೂ ರಟ್ಟಿನ ಪೆಟ್ಟಿಗೆಗಳನ್ನು ವ್ಯವಸ್ಥಿತವಾಗಿ ಇಟ್ಟಿದ್ದನ್ನು ಕಂಡು ಅನುಮಾನಗೊಂಡರು. ಬಳಿಕ ಆ ಪೆಟ್ಟಿಗೆಗಳನ್ನು ಸರಿಸಿದಾಗ ಸಣ್ಣ ಬಾಗಿಲು ಕಂಡು ಬಂದಿತು. ಬಳಿಕ ಆ ಬಾಗಿಲು ತೆರೆದಾಗ ಅಲ್ಲಿ ಮೂವರು ಯುವತಿಯರನ್ನು ಸಣ್ಣ ಇಕ್ಕಟ್ಟಾದ ಗುಹೆಯಂತಹ ಜಾಗದಲ್ಲಿ ಬಚ್ಚಿಟ್ಟಿದ್ದು ಬೆಳಕಿಗೆ ಬಂತು.
ವಸತಿ ಗೃಹದ ಮಾಲೀಕ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅಭಿಷೇಕ್ ಬಡತನದ ಬೇಗೆಯಲ್ಲಿ ನರಳುತ್ತಿದ್ದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ದ. ಪ್ರಕರಣ ಕುರಿತು ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಸತಿ ಗೃಹಕ್ಕೆ ಮಹಿಳೆಯರನ್ನು ಸರಬರಾಜು ಮಾಡುತ್ತಿದ್ದ ರಾಮನಗರ ಜಗ ಎಂಬಾತ ತಲೆಮರೆಸಿಕೊಂಡಿದ್ದು ಆರೋಪಿ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.