ADVERTISEMENT

ಯೋಜನೆ ಯಶಸ್ಸಿಗೆ ಪ್ರಚಾರವೂ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 6:10 IST
Last Updated 25 ಫೆಬ್ರುವರಿ 2012, 6:10 IST

ಮಂಡ್ಯ: ಗ್ರಾಮೀಣ ಹಾಗೂ ಬಡ ಜನರ ಅಭಿವದ್ಧಿಗಾಗಿ ಸರ್ಕಾರ ರೂಪಿಸಿರುವ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಲು ಪರಿಣಾಮಕಾರಿ ಅನುಷ್ಠಾನದ ಜೊತೆಗೆ ಅದರ ಬಗೆಗೆ ವ್ಯಾಪಕ ಪ್ರಚಾರವೂ ಅಗತ್ಯ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭದ್ರಾಚಲಮೂರ್ತಿ ಅಭಿಪ್ರಾಯಪಟ್ಟರು.

ತಾಲ್ಲೂಕು ಕೀಲಾರ ಗ್ರಾಮದಲ್ಲಿ ಗುರುವಾರ ವಾರ್ತಾ ಇಲಾಖೆ ಆಯೋಜಿಸಿದ್ದ ವಿಶೇಷ ಪ್ರಚಾರಾಂದೋಲನ ಉದ್ಘಾಟಿಸಿದ ಅವರು, ಕೃಷಿಯು ಲಾಭದಾಯಕ ಆಗಿದ್ದರೂ, ಗ್ರಾಮೀಣ ಜನರು ಅದರಿಂದ ವಿಮುಖರಾಗಿದ್ದಾರೆ. ಅವರನ್ನು ಉಳಿಸಲು ಸಂಬಂಧಿತ ಯೋಜನೆಗಳ ಪ್ರಚಾರ ಅಗತ್ಯ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ವಿಜಯಾನಂದ, ಪ್ರಚಾರಾಂದೋಲನದ ಮೂಲಕ ಸರ್ಕಾರ ವಿವಿಧ ಯೋಜನೆಗಳ ಮಾಹಿತಿ ಪಡೆಯಬೇಕು ಎಂದು ಸಲಹೆ ಮಾಡಿದರು.

ವಾರ್ತಾ ಇಲಾಖೆ ಉಪ ನಿರ್ದೇಶಕ ಕೆ. ಗೋಪಾಲಗೌಡರು, ಮಂಡ್ಯ, ಪಾಂಡವಪುರ ಹಾಗೂ ಮದ್ದೂರು ತಾಲ್ಲೂಕಿನ ಆಯ್ದ 100 ಗ್ರಾಮಗಳಲ್ಲಿ ಫೆಬ್ರವರಿ 23 ರಿಂದ ಮಾರ್ಚ್ 3 ರವರಗೆ ತೀವ್ರ ಪ್ರಚಾರಾಂದೋಲನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳ ಬಗೆಗೆ ವಸ್ತು ಪ್ರದರ್ಶನ  ಹಾಗೂ ನಾಲ್ವಡಿ ಕಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ, ಕುವೆಂಪು ರವರನ್ನು ಕುರಿತ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುವುದು ಎಂದರು. ಕೃಷಿಕ ಕೆ.ಜಿ ಶಿವರಾಮೇಗೌಡ ಕೀಲಾರ ಗ್ರಾಪಂ ಅಧ್ಯಕ್ಷ ಪುಟ್ಟೇಗೌಡ, ಉಪಾಧ್ಯಕ್ಷೆ ಎ.ಆರ್. ಸುಧಾ, ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.