ADVERTISEMENT

`ರತ್ನಾಂಗಿ' ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 9:33 IST
Last Updated 2 ಆಗಸ್ಟ್ 2013, 9:33 IST

ಪಾಂಡವಪುರ: ತಾಲ್ಲೂಕಿನ ಮೇಲುಕೋಟೆಯ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿನ ವಿವಾದಿತ ರತ್ನಾಂಗಿ ಆಭರಣವನ್ನು ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿಗಳ ಸಮಕ್ಷಮದಲ್ಲಿ ಪೊಲೀಸ್ ಇಲಾಖೆಯ ವಶಕ್ಕೆ ಬುಧವಾರ ಪಡೆಯಲಾಗಿದ್ದು, ಆಭರಣವನ್ನು ಜಿಲ್ಲಾ ಖಜಾನೆಯಲ್ಲಿರಿಸಲಾಗಿದೆ.

ಕಳೆದ ಭಾನುವಾರ ನಡೆದ ಆಭರಣಗಳ ಮೌಲ್ಯಮಾಪನದಲ್ಲಿ ಗೊಂದಲವುಂಟಾಗಿ ಸರ್ಕಾರದ ಅಧಿಕೃತ ಮೌಲ್ಯಮಾಪಕರಿಂದಲೇ ಆಭರಣ ಮೌಲ್ಯಮಾಪನ ನಡೆಸಬೇಕೆಂದು ಪೊಲೀಸ್ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಬುಧವಾರ ಮೌಲ್ಯಮಾಪನ ನಡೆಯಿತು.

ಹಿರಿಯ ಅಧಿಕಾರಿಗಳ ಸಮಕ್ಷಮ ಪೊಲೀಸ್ ಇಲಾಖೆಯ ವತಿಯಿಂದಲೇ ಮೌಲ್ಯಮಾಪಕರು ರತ್ನಾಂಗಿ ಆಭರಣದ ಮೇಲಾಯ, ಕೀಳಾಯ ಮತ್ತು ಪಾದಜೋಡಿಗಳನ್ನು ಮೌಲ್ಯಮಾಪನ ಮಾಡಿದರು. ನಂತರ ಆಭರಣವನ್ನು ಪೊಲೀಸ್ ಇಲಾಖೆಯ ವಶಕ್ಕೆ ತೆಗೆದುಕೊಳ್ಳಲಾಯಿತು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದನಾಯ್ಕ, ಪ್ರಕರಣದ ತನಿಖಾಧಿಕಾರಿ ಇನ್‌ಸ್ಪೆಕ್ಟರ್ ಚಂದ್ರಶೇಖರ್, ತಹಶೀಲ್ದಾರ್ ಡಿ.ಎಸ್. ಶಿವಕುಮಾರಸ್ವಾಮಿ, ಪಿಎಸ್‌ಐ ವೆಂಕಟೇಶ್,  ಪಿಎಸ್‌ಐ ಅಶೋಕ್, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಡ್ಯರಮೇಶ್‌ರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.