ಮದ್ದೂರು: ವಿಶ್ವಪ್ರಸಿದ್ಧ ಪಕ್ಷಿಧಾಮ ಕೊಕ್ಕರೆ ಬೆಳ್ಳೂರು ಗ್ರಾಮದಿಂದ ಬನ್ನಹಳ್ಳಿ ಹಳ್ಳಕ್ಕೆ ತೆರಳುವ ನಕಾಶೆ ಖರಾಬು ರಸ್ತೆಯ ಒತ್ತುವರಿಯನ್ನು ಪೂರ್ಣವಾಗಿ ತೆರವುಗೊಳಿಸಿ ಸುಸಜ್ಜಿತ ರಸ್ತೆ ನಿರ್ಮಿಸಲು ಗ್ರಾಮದ ಮುಖಂಡರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಗ್ರಾಮದ ಕೆಲವು ರೈತರ ಮನವಿ ಮೇರೆಗೆ ಏಕಪಕ್ಷೀಯವಾಗಿ ಗ್ರಾಮದ ಸರ್ವೆ ಸಂಖ್ಯೆ 98/1, 3,4,5,6 ಹಾಗೂ 99/1,6ರಲ್ಲಿ ಕೇವಲ 500ಮೀಟರ್ಗಳ ರಸ್ತೆ ಒತ್ತುವರಿ ತೆರವಿಗೆ ಮುಂದಾಗಿರುವುದು ಸರಿಯಲ್ಲ. ಮಾಡುವುದಾದರೆ ಪೂರ್ಣ ಸುಮಾರು 1.5 ಕಿ.ಮೀ ದೂರದ ರಸ್ತೆಯ ಒತ್ತುವರಿ ತೆರವಿಗೆ ಜಿಲ್ಲಾಧಿಕಾರಿಗಳು ಮುಂದಾಗಬೇಕೆಂದು ಅವರು ಒತ್ತಾಯಿಸಿದರು.
ಪೂರ್ಣ ರಸ್ತೆ ಒತ್ತುವರಿ ತೆರವು ಮಾಡುವ ಸಲುವಾಗಿ ಗ್ರಾಮಸ್ಥರು ಈಗಾಗಲೇ ಜಿಲ್ಲಾಡಳಿತಕ್ಕೆ ಮೂರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಅಧಿಕಾರಶಾಹಿ ಪ್ರಭಾವ ಇರುವ ಒಬ್ಬ ವ್ಯಕ್ತಿಯ ಜಮೀನಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇವಲ 500ಮೀ. ರಸ್ತೆ ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾಗಿರುವುದು ಸರಿಯಲ್ಲ. ಪೂರ್ಣ ರಸ್ತೆ ಒತ್ತುವರಿ ತೆರವಿಗೆ ಈ ಕೂಡಲೇ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಮುಂದಾಗಬೇಕು ಇಲ್ಲದಿದ್ದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಅವರು ಎಚ್ಚರಿಕೆ ನೀಡಿದರು.
ಗ್ರಾಮದ ಮುಖಂಡರುಗಳಾದ ಬಿ.ಟಿ. ಪುಟ್ಟೇಗೌಡ, ಪುಟ್ಟರಾಮೇಗೌಡ, ತಮ್ಮಣ್ಣಗೌಡ, ಶಂಕರ್, ಮಹೇಶ್, ಸುರೇಶ್, ದೇವರಾಜು, ಅಪ್ಪಾಜಿ ಗೌಡ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.