ADVERTISEMENT

ರಾಜಕೀಯ ದ್ವೇಷ: 8 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 7:05 IST
Last Updated 6 ಏಪ್ರಿಲ್ 2011, 7:05 IST
ರಾಜಕೀಯ ದ್ವೇಷ: 8 ಮಂದಿಗೆ ಗಾಯ
ರಾಜಕೀಯ ದ್ವೇಷ: 8 ಮಂದಿಗೆ ಗಾಯ   

ಮದ್ದೂರು: ಹಳೇ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಗುಂಪು ಘರ್ಷಣೆ ಸಂಭವಿಸಿ ಎಂಟು ಮಂದಿಗೆ ತೀವ್ರವಾಗಿ ಗಾಯ ಗೊಂಡಿರುವ ಘಟನೆ ಸಮೀಪದ ಹೊಸಕೆರೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಜೆಡಿಎಸ್ ಕಾರ್ಯಕರ್ತರಾದ ಲೋಕೇಶ್, ರಾಮಕೃಷ್ಣ, ಧನಂ ಜಯ, ಕೆಂಡೇಗೌಡ, ವಿಜಯೇಂದ್ರ, ದೇವರಾಜು, ಜಯರಾಂ, ಕಾಂಗ್ರೆಸ್‌ನ ರವಿ ಅವರಿಗೆ ಗಾಯಗಳಾಗಿವೆ. ಇವರಲ್ಲಿ ತೀವ್ರ ಗಾಯಗೊಂಡ ಲೋಕೇಶ್, ರಾಮಕೃಷ್ಣ ಅವರನ್ನು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿದೆ. ಇನ್ನುಳಿದವರು ಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿವರ: ಈ ಹಿಂದೆ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಲೋಕೇಶ್ ಹಾಗೂ ರವಿ ಅವರಿಗೆ ವಿವಾದ ಏರ್ಪಟ್ಟು, ಪರಸ್ಪರ ಬೆಸಗರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಜಿಪಂ ಸದಸ್ಯೆ ಸವಿತಾ ಅವರ ಪತಿ ಮಧುಸೂದನ್ ಅವರು ಸೊಸೈಟಿ ಬಳಿ ನ್ಯಾಯ ತೀರ್ಮಾನ ಮಾಡುವುದಾಗಿ ಎರಡು ಗುಂಪಿನವರನ್ನು ಆಹ್ವಾನಿಸಿದ್ದರು.

ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ಅಣ್ಣೂರು ಗ್ರಾಪಂ ಕಾರ್ಯದರ್ಶಿ ಮಧುಸೂದನ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಸುಧೀರ್‌ಕುಮಾರ್, ರವಿ, ಅನಿಲ್ ಕುಮಾರ್ ಜೆಡಿಎಸ್ ಕಾರ್ಯಕರ್ತರ ಮೇಲೆ ದೊಣ್ಣೆ ಮಚ್ಚುಗಳಿಂದ ತೀವ್ರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಇದೀಗ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.