ಮಂಡ್ಯ: ನಗರಸಭೆಯ ಕಾಂಗ್ರೆಸ್ ಸದಸ್ಯರಲ್ಲಿ ಗೊಂದಲವಿಲ್ಲ. ಪಕ್ಷದಿಂದ ಯಾರಿಗೇ ಟಿಕೆಟ್ ನೀಡಿದರೂ, ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಸದಸ್ಯ ಹೊಸಳ್ಳಿ ಬೋರೇಗೌಡ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂಥವರಿಗೆ ಟಿಕೆಟ್ ನೀಡಬೇಕು ಎಂದು ನಗರಸಭೆ ಸದಸ್ಯರು ಪತ್ರ ಬರೆದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ರಾಜೀನಾಮೆ ನೀಡುವುದಿಲ್ಲ ಎಂದರು.
ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಯುವ ಮುಖಂಡ ಚಿದಂಬರ್ ಸೇರಿದಂತೆ ಆಕಾಂಕ್ಷಿತರಿಗೆ ಯಾರಿಗೇ ಹೈಕಮಾಂಡ್ ಅವಕಾಶ ನೀಡಲಿ. ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ ಎಂದರು. ಆತ್ಮಾನಂದ ಅವರಿಗೆ ಟಿಕೆಟ್ ಪಡೆಯಲು ಎಂದು ಸಹಿ ಹಾಕಿಸಿಕೊಂಡಿರುವ ಕೆಲವರು, ನಂತರದಲ್ಲಿ ಅಂಬರೀಷ್ ನೀಡಬಾರದು ಎಂದು ಸೇರಿಸಿಕೊಂಡಿದ್ದಾರೆ. ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ನಗರಸಭೆ ಸದಸ್ಯರಾದ ಸುಮಾರಾಣಿ, ಅನಿಲ್ಕುಮಾರ್, ಮಹೇಶ್, ಸುಕುಮಾರ್, ಅನಂತ ಪದ್ಮನಾಭ ಇದ್ದರು.
ಬಿಜೆಪಿಗೆ ರಾಜೀನಾಮೆ
ಪಕ್ಷದ ನಾಯಕರ ನಡವಳಿಕೆಗೆ ಬೇಸತ್ತು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಸಿ.ಆರ್. ರಮೇಶ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿಯೂ ಗುಂಪುಗಾರಿಕೆ ಹೆಚ್ಚಾಗಿದೆ. ನಾಯಕರೂ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಪಾಂಡವಪುರ ಅಲ್ಪಸಂಖ್ಯಾತರ ಘಟಕದ ಸಯ್ಯದ್ ಇಲಿಯಾಸ್ ಕೂಡಾ ರಾಜೀನಾಮೆ ಘೋಷಿಸಿದರು. ಮುಖಂಡರಾದ ಚನ್ನೇಗೌಡ, ನಜೀರ್ ಅಹ್ಮದ್ ಉಪಸ್ಥಿತರಿದ್ದರು.
`ಮಹಿಳೆಯರಿಗೆ ಟಿಕೆಟ್ ನೀಡಿ'
ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಮಹಿಳೆಯರಿಗೆ ಟಿಕೆಟ್ ನೀಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಮಲ್ಲಾರಾಧ್ಯ ಪ್ರಸನ್ನ ಆಗ್ರಹಿಸಿದ್ದಾರೆ.
ಮಹಿಳಾ ಮೀಸಲಾತಿ ಬಗೆಗೆ ಚರ್ಚೆಯಾಗುತ್ತಿದೆ. ಪಕ್ಷದ ವತಿಯಿಂದ ಪ್ರತಿ ಲೋಕಸಭಾ ಕ್ಷೇತ್ರಕ್ಕೂ ಒಬ್ಬರಿಗೆ ಅವಕಾಶ ನೀಡಬೇಕು. ಮಂಡ್ಯದಲ್ಲಿಯೂ ಹಾಗೆ ಮಾಡಬೇಕು. ಇದರಿಂದ ಆಕಾಂಕ್ಷಿಗಳ ನಡುವೆಯೂ ಇರುವ ಗೊಂದಲವೂ ಪರಿಹಾರವಾಗುತ್ತದೆ ಎಂದು ಹೇಳಿದರು.
ಕಲ್ಪನಾ ಬೆಂಬಲಿಗರಿಂದ ಜೆಡಿಎಸ್ಗೆ ವಿದಾಯ
ಮದ್ದೂರು: ಶಾಸಕಿ ಕಲ್ಪನಾ ಸಿದ್ದರಾಜು ಅವರ ರಾಜೀನಾಮೆಯ ಬೆನ್ನ ಹಿಂದೆಯೇ ಅವರ ಬೆಂಬಲಿಗರು ಜೆಡಿಎಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಅಜ್ಜಹಳ್ಳಿರಾಮಕೃಷ್ಣ, ಟೌನ್ ಅಧ್ಯಕ್ಷ ಚಿದುಕುಮಾರ್, ಪ್ರಧಾನ ಕಾರ್ಯದರ್ಶಿ ಎಚ್.ಆರ್.ರವಿ(ಪಾರ್ಲರ್ ರವಿ), ಯುವ ಸಂಘಟನಾ ಕಾರ್ಯದರ್ಶಿ ನಗರಕೆರೆ ಶ್ರೀಧರ್ ತಮ್ಮ ರಾಜೀನಾಮೆ ಪತ್ರವನ್ನು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಡಿ.ರಮೇಶ್ ಅವರಿಗೆ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.