ADVERTISEMENT

ರಾತ್ರೋರಾತ್ರಿ ಬಾಗಿಲು ಮುಚ್ಚಿದ ಗಣಿಗಳು!

ತನಿಖಾಧಿಕಾರಿಗಳ ಭೇಟಿ ಹಿನ್ನೆಲೆ, ಸ್ವಯಂಪ್ರೇರಿತ ಬಂದ್‌, ಸಾಮಗ್ರಿ ತೆರವು

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 8:58 IST
Last Updated 13 ಜುಲೈ 2017, 8:58 IST
ರಾತ್ರೋರಾತ್ರಿ ಬಾಗಿಲು ಮುಚ್ಚಿದ ಗಣಿಗಳು!
ರಾತ್ರೋರಾತ್ರಿ ಬಾಗಿಲು ಮುಚ್ಚಿದ ಗಣಿಗಳು!   

ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದ ತನಿಖೆಗಾಗಿ ಅಧಿಕಾರಿಗಳ ತಂಡ ಭೇಟಿ ನೀಡುತ್ತದೆ ಎಂಬ ಸುದ್ದಿ ಹರಡಿದ ಹಿನ್ನೆಲೆಯಲ್ಲಿ ಪಾಂಡವಪುರ ತಾಲ್ಲೂಕಿನ ಹಲವು ಗಣಿಗಳು ಬುಧವಾರ ಬಂದ್‌ ಆಗಿದ್ದವು.

ಬೇಬಿ ಬೆಟ್ಟದ ಸುತ್ತಮುತ್ತಲ ಗಣಿ ಮಾಲೀಕರು ಮಂಗಳವಾರ ರಾತ್ರೋರಾತ್ರಿ ಗಣಿ ಸಾಮಗ್ರಿಗಳನ್ನು ತೆರವುಗೊಳಿಸಿದ್ದು, ಬುಧವಾರ ಯಾವುದೇ ಚಟುವಟಿಕೆ ನಡೆಸಲಿಲ್ಲ.

ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 18 ಕಂಪೆನಿಗಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ₹ 90 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿತ್ತು. ಇದರಲ್ಲಿ ಸಂಸದ ಸಿ.ಎಸ್‌.ಪುಟ್ಟರಾಜು ಸಹಭಾಗಿತ್ವದ ಎಸ್‌.ಟಿ.ಜಿ ಕಂಪೆನಿಗೆ ₹ 40 ಲಕ್ಷ ದಂಡ ವಿಧಿಸಿತ್ತು.

ADVERTISEMENT

ಪ್ರಕರಣ ಕುರಿತು ಹೆಚ್ಚಿನ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗಿದ್ದು, ತನಿಖಾಧಿಕಾರಿಗಳು ಭೇಟಿ ನೀಡುತ್ತಾರೆ ಎಂಬ ಸುದ್ದಿ ಹರಡಿದ ಕಾರಣ ಗಣಿ ಮಾಲೀಕರು ದಾಸ್ತಾನು ತೆರವುಗೊಳಿಸಿದರು.

‘ತನಿಖಾಧಿಕಾರಿಗಳು ಭೇಟಿ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಗಣಿ ಕಂಪೆನಿಗಳ ಅಕ್ರಮ ಸಾಬೀತಾಗಿದ್ದು, ದಂಡ ವಿಧಿಸಲಾಗಿದೆ. ಹೀಗಾಗಿ, ಮಾಲೀಕರು ಸ್ವಯಂಪ್ರೇರಿತರಾಗಿ ಗಣಿಯ ಬಾಗಿಲು ಮುಚ್ಚಿದ್ದಾರೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ನಾಗಭೂಷಣ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.