ಕೃಷ್ಣರಾಜಪೇಟೆ: ಸರ್ಕಾರದ ಲೆವಿ ನೀತಿಯನ್ನು ಖಂಡಿಸಿ ತಾಲ್ಲೂಕಿನ ಅಕ್ಕಿಗಿರಣಿ ಮಾಲೀಕರ ಸಂಘದ ವತಿಯಿಂದ ತಾಲ್ಲೂಕಿನ ಎಲ್ಲ ಅಕ್ಕಿಗಿರಣಿಗಳನ್ನು ಸೋಮವಾರ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ಸಾಂಕೇತಿಕವಾಗಿ ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದ ಅಕ್ಕಿಗಿರಣಿ ಮಾಲೀಕರು, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಲೆವಿ ಸಂಗ್ರಹಣೆಗೆ ತಾಲ್ಲೂಕಿನಲ್ಲಿ ಸೂಕ್ತವಾದ ಉಗ್ರಾಣದ ವ್ಯವಸ್ಥೆ ಆಗಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರರಿಗೆ ಅರ್ಪಿಸಿದರು.
ತಾಲ್ಲೂಕು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಸ್. ಸೋಮಶೇಖರ್, ಉಪಾಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ವೆಂಕಟಶೆಟ್ಟಿ, ಪದಾಧಿಕಾರಿಗಳಾದ ರಾಮಕೃಷ್ಣೇಗೌಡ, ಶ್ಯಾಂಪ್ರಸಾದ್, ಕೆ.ಎಸ್. ಮಂಜುನಾಥ್, ಯತಿರಾಜು, ಕೆ.ಎಸ್. ಹರಿಪ್ರಸಾದ್, ಅಬ್ದುಲ್ ಉಬೇದ್, ಎಚ್.ಎನ್. ರಮೇಶ್, ನಾಗರಾಜು ಇದ್ದರು.
ಖರೀದಿ ಸ್ಥಗಿತಕ್ಕೆ ಆಗ್ರಹ
ಮದ್ದೂರು: ಹೊರ ರಾಜ್ಯದ ಗಿರಣಿಗಳಿಂದ ಅಕ್ಕಿ ಖರೀದಿ ಸ್ಥಗಿತಗೊಳಿಸಲು ಆಗ್ರಹಿಸಿ ತಾಲ್ಲೂಕು ಅಕ್ಕಿ ಗಿರಣಿ ಮಾಲೀಕರ ಸಂಘದ ಸದಸ್ಯರು ಸೋಮವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸರ್ಕಾರದ ನಿರ್ಲಕ್ಷ್ಯ ಧೋರಣೆ ಖಂಡಿಸಿ ಘೋಷಣೆ ಕೂಗಿದ ಮಾಲೀಕರು, ಒಂದು ಗಂಟೆಗೂ ಹೆಚ್ಚು ಕಾಲ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿ ಬಳಿಕ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್. ಶಂಕರಯ್ಯ ಮಾತನಾಡಿದರು.
ತಾಲ್ಲೂಕು ಅಕ್ಕಿ ಗಿರಣಿ ಮಾಲೀಕರ ಸಂಘದ ಉಪಾಧ್ಯಕ್ಷ ಹೇಮರಾಜು ಪ್ರಧಾನ ಕಾರ್ಯದರ್ಶಿ ಕಬೀರ್, ಖಜಾಂಚಿ ಪುಟ್ಟೇಗೌಡ, ಸದಸ್ಯರಾದ ಕೆ.ಟಿ. ಕೃಷ್ಣೇಗೌಡ, ಆನಂದ್, ಗುರುಮೂರ್ತಿ, ಸುರೇಶಬಾಬು, ಇಂದ್ರಕುಮಾರ್, ಚಂದ್ರಶೇಖರ್, ಹುಚ್ಚಪ್ಪ ಹಾಜರಿದ್ದರು.
ಬಂದ್ಗೆ ಬೆಂಬಲ
ಮಂಡ್ಯ: ಸರ್ಕಾರ ನಿಗದಿ ಪಡಿಸಿರುವ ಪ್ರಮಾಣದಲ್ಲಿ ಲೆವಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ರಾಜ್ಯದಲ್ಲಿ ನಡೆದಿರುವ ಅಕ್ಕಿ ಗಿರಣಿ ಬಂದ್್ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಜಿಲ್ಲೆಯಲ್ಲಿಯೂ ಅಕ್ಕಿ ಗಿರಣಿಗಳನ್ನು ಬಂದ್್ ಮಾಡಲಾಗಿತ್ತು.
ಈ ಕುರಿತು ಹೇಳಿಕೆ ನೀಡಿರುವ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ರಾಮಕೃಷ್ಣ ಅವರು, ಜಿಲ್ಲೆಯಲ್ಲಿಯೂ ಗಿರಣಿ ಬಂದ್ ಮಾಡಿದ್ದೇವೆ. ಈ ವಿಷಯವನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಬೆಲೆ ನಿಗದಿಯಾಗುವವರಿಗೆ ಬಂದ್ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ 258 ಅಕ್ಕಿ ಗಿರಣಿಗಳಿವೆ. ಅವುಗಳ ಪೈಕಿ ಬಹುತೇಕ ಬಂದ್ ಆಗಿವೆ. ರಾಜ್ಯ ಸರ್ಕಾರವು 2,400 ರೂಪಾಯಿಯನ್ನು ಪ್ರತಿ ಕ್ವಿಂಟಲ್ಗೆ ನೀಡುತ್ತಿದೆ. 2,600 ರೂಪಾಯಿ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.