ADVERTISEMENT

ಸಂಭ್ರಮದ ಚಲುವನಾರಾಯಣ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 7:50 IST
Last Updated 5 ಏಪ್ರಿಲ್ 2012, 7:50 IST

ಪಾಂಡವಪುರ: ತಾಲ್ಲೂಕಿನ ಮೇಲುಕೋಟೆಯಲ್ಲಿ ಶ್ರೀ ಚಲುವನಾರಾಯಣಸ್ವಾಮಿ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಯಾತ್ರಾದಾನ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಅರಿಸಿನ ಕುಂಕುಮದಿಂದ ರಥಬಲಿ ಪೂಜೆ ಮಾಡಲಾಯಿತು. ಚಲುವನಾರಾಯಣಸ್ವಾಮಿ ದೇವರ ಮೂರ್ತಿಗೆ ರಾಜಮುಡಿ ಕಿರೀಟ ತೊಡಿಸಿ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು.

ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾದ ರಥೋತ್ಸವವು ಮುಖ್ಯ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ಚಲುವನಾರಾಯಣಸ್ವಾಮಿ ಮತ್ತು ಶ್ರೀದೇವಿ, ಭೂದೇವಿ ಮೂರ್ತಿಗಳನ್ನು ಹೊತ್ತ ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಸಮರ್ಪಿಸಿದರು. 

ಮಧ್ಯಾಹ್ನ 3 ಗಂಟೆಗೆ ರಥೋತ್ಸವವು ಚಲುವನಾರಾಯಣಸ್ವಾಮಿ ದೇವಸ್ಥಾನ ತಲುಪಿ ಕೊನೆಗೊಂಡಿತು. ನಂತರ ಸಂಜೆಯ ತನಕ ಭಕ್ತರು ರಥಕ್ಕೆ ಪೂಜೆ ಸಲ್ಲಿಸಿದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಅಸಂಖ್ಯಾತ ಜನರು ಚಲುವನಾರಾಯಣಸ್ವಾಮಿ ದೇವರ ದರ್ಶನಕ್ಕಾಗಿ ಪ್ರಯಾಸ ಪಡಬೇಕಾಯಿತು. ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರಿಂದ ದೇವಸ್ಥಾನದ ಮುಂಭಾಗ ಸಾಲಾಗಿ ನಿಂತು ದೇವರ ದರ್ಶನ ಪಡೆದರು.

ಕೆಲವು ದಾನಿಗಳು ಅಲ್ಲಲ್ಲಿ ಬೆಲ್ಲದ ಪಾನಕ, ಮಜ್ಗಿಗೆ ಕೇಂದ್ರಗಳನ್ನು ತೆರೆದಿದ್ದರಿಂದ ಬಿಸಿಲಿನ ತಾಪಕ್ಕೆ ಬಳಲಿದ್ದ ಭಕ್ತರು ಮಜ್ಜಿಗೆ ಸೇವಿಸಿ ಬಾಯಾರಿಕೆ ತಣಿಸಿಕೊಂಡರು. ಪೊಲೀಸರು ವಾಹನ ಸಂಚಾರ ನಿಯಂತ್ರಿಸುವ ಜೊತೆಗೆ, ಭಕ್ತಾಧಿಗಳು ಸುಲಲಿತವಾಗಿ ದೇವರ ದರ್ಶನ ಪಡೆಯಲು ಅನುಕೂಲ ಕಲ್ಪಿಸಿದರು.

ರಥೋತ್ಸವದ ಬಳಿಕ ಚಲುವನಾರಾಯಣಸ್ವಾಮಿ ಮತ್ತು ರಾಮಾನುಜರಿಗೆ ಅಮ್ಮನವರ ಸನ್ನಿಧಿಯಲ್ಲಿ ಅಭಿಷೇಕ ಹಾಗೂ ರಾತ್ರಿ ಬಂಗಾರ ಪಲ್ಲಕ್ಕಿ ಉತ್ಸವ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.