ಪಾಂಡವಪುರ: ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಅಧಿಕಾರದಿಂದ ಕೆಳಗಿಸಬೇಕೆಂದು ಪಟ್ಟುಹಿಡಿದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರ ನಡವಳಿಕೆ ಖಂಡಿಸಿ ಸ್ವಾಭಿಮಾನ ಒಕ್ಕಲಿಗರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.
ಪಟ್ಟಣದ ಡಾ.ರಾಜ್ಕುಮಾರ್ ವೃತ್ತದಲ್ಲಿ ಪ್ರತಿಭಟನೆಕಾರರು ಮಾನವ ಸರಪಳಿ ರಚಿಸಿದರು.
ಬಜೆಟ್ ಮಂಡಿಸಲು ಮುಂದಾಗಿರುವ ಸದಾನಂದಗೌಡರನ್ನು ಎಲ್ಲಾ ಒಕ್ಕಲಿಗ ಜನಾಂಗದ ಶಾಸಕರು ಬೆಂಬಲಿಸಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಆರ್.ರಮೇಶ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಮುಖ್ಯಮಂತ್ರಿ ಸದಾನಂದಗೌಡರು ಹಗರಣ ಮುಕ್ತ ಮತ್ತು ದಕ್ಷ ಆಡಳಿತ ನೀಡುತ್ತಿದ್ದಾರೆ. ಬಜೆಟ್ ಮಂಡಿಸಲು ಅವರು ಸಮರ್ಥರಾಗಿದ್ದಾರೆ. ಸದಾನಂದಗೌಡರು ಮುಖ್ಯಮಂತ್ರಿಯಾಗಲು ಕಾರಣರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಅವರ ವಿರುದ್ಧ ತಿರುಗಿಬಿದ್ದಿರುವುದು ವಿಷಾದಕರ ಸಂಗತಿ. ವೀರಶೈವ ಮಠಾಧೀಶರು ಮೊದಲು ಜಾತಿ ರಾಜಕಾರಣ ಮಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಎಚ್. ಎನ್.ಮಂಜುನಾಥ್, ದೊರೆಸ್ವಾಮಿ, ಕೋದಂಡ, ಯುವ ಕಾಂಗ್ರೆಸ್ ಅಧ್ಯಕ್ಷ ಕೋ.ಪು.ಗುಣಶೇಖರ್, ಮುಖಂಡ ದೇವರಾಜು, ಜೆಡಿಎಸ್ ಮುಖಂಡ ರಾದ ಚನ್ನಕೇಶವ, ಆದರ್ಶ, ಸಂಘದ ಮುಖಂಡರಾದ ಕೆ.ಎನ್.ನಾಗೇಗೌಡ, ಎಸ್.ಲಕ್ಷ್ಮೇಗೌಡ, ಎಚ್.ಆರ್. ಧನ್ಯಕುಮಾರ್, ಸಂಜಯ ಇದ್ದಾರೆ.
ಕಸಾಪ: ಸಭೆ ಇಂದು
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಮತ್ತು ಜಿಲ್ಲೆಯ 2012ರ ಚುನಾ ವಣೆಯ ಬಗ್ಗೆ ಚರ್ಚಿಸಲು ಮಾ.21 ಬುಧವಾರ ಸಂಜೆ 5 ಗಂಟೆಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಭೆ ಕರೆಯಲಾಗಿದೆ. ಈ ಸಭೆಗೆ ಸದಸ್ಯರೆಲ್ಲರೂ ಭಾಗವಹಿಸಬೇಕೆಂದು ಸದಸ್ಯ ಎಚ್.ಆರ್.ಧನ್ಯಕುಮಾರ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.