ಮಂಡ್ಯ: ಸಮಗ್ರ ಸಮಾನ ಶಿಕ್ಷಣ ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಮಾನ ಶಿಕ್ಷಣಕ್ಕಾಗಿ ಸಮನ್ವಯ ವೇದಿಕೆ ಕಾರ್ಯಕರ್ತರು ನಗರದ ಮಹಾವೀರ ವೃತ್ತದ ಬಳಿ ಸೋಮವಾರ ಜಾಗೃತಿ ಜಾಥಾ ನಡೆಸಿದರು.
ಮೂರು ವರ್ಷದ ಮಕ್ಕಳ ಪೋಷಣೆ ಹಾಗೂ ಆರೈಕೆಗೆ ಪೂರಕವಾದ ವ್ಯವಸ್ಥೆ, ನಾಲ್ಕು ವರ್ಷದಿಂದ ಆರು ವರ್ಷಗಳಿಗೆ ಶಾಲಾ ಪೂರ್ವ ಶಿಕ್ಷಣ ಹಾಗೂ ಒಂದರಿಂದ ನಾಲ್ಕನೇ ತರಗತಿಯ ಎಲ್ಲಾ ಮಕ್ಕಳಿಗೆ ಉಚಿತ, ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಗುಣಾತ್ಮಕವಾಗಿ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ಐದರಿಂದ ಪಿಯುಸಿ ವರೆಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಸಲುವಾಗಿ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಕೇಂದ್ರೀಯ ವಿದ್ಯಾಶಾಲೆಗಳ ಗುಣಮಟ್ಟಕ್ಕೆ ಅನುಸಾರವಾಗಿರುವಂತೆ ಸುಸಜ್ಜಿತ ಸಾರ್ವಜನಿಕ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಬೇಕು. ಪ್ರೌಢಶಾಲಾ ಹಂತದಲ್ಲಿ ಮೊದಲ ಅಥವಾ ಎರಡನೆಯ ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯವಾಗಬೇಕು. ನರ್ಸರಿಯಿಂದಲೇ ಇಂಗ್ಲಿಷ್ಅನ್ನು ಒಂದು ಭಾಷೆಯಾಗಿ ಶಿಶುಸ್ನೇಹಿ ಪದ್ಧತಿಯಲ್ಲಿ ಕಲಿಸಬೇಕು ಎಂದು ಆಗ್ರಹಿಸಿದರು.
ಆರ್ಟಿಇ ಕಾಯ್ದೆಯನ್ನು ಖಾಸಗಿ ಶಾಲೆಗಳ ಸಾಮಾಜಿಕ ಹೊಣೆಗಾರಿಕೆ ಕಾಯ್ದೆ ಎಂದು ತಿದ್ದುಪಡಿ ಮಾಡಿ ಖಾಸಗಿ ಶಾಲೆಗಳಲ್ಲಿ ಹಿಂದುಳಿದ ಬಡವರ್ಗದ ಮಕ್ಕಳಿಗೆ ಅವರ ವಾರ್ಷಿಕ ಪ್ರವೇಶಾವಕಾಶಗಳ ಶೇ 25 ರಷ್ಟನ್ನು ಮೀಸಲಿಡಬೇಕು. ಜೊತೆಗೆ ಆರ್ಟಿಇ ಗೆ ಮೀಸಲಿರಿಸಿದ ನಿಧಿಯನ್ನು ಗ್ರಾಮೀಣ ಶಾಲಾ ಮಕ್ಕಳ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಕೋರಿದರು. ವೇದಿಕೆ ಸಂಚಾಲಕರಾದ ನಾಗರತ್ನ ಬಂಜಗೆರೆ, ಶೋಭಾ, ಮಮತಾ, ಶಕುಂತಲಾ, ರಜನಿ, ಮಂಗಳಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.