ಮಂಡ್ಯ: ನಗರದ ಕಾವೇರಿ ವನ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಬುಧವಾರ ಮಹಿಳೆಯರು ಪಾಲ್ಗೊಂಡು ಗಮನಸೆಳೆದರು.
ಕವಯಿತ್ರಿ ಡಾ.ಲತಾ ರಾಜಶೇಖರ್, ಶಾರದಾ ರಮೇಶ್ರಾಜು, ಪುಟ್ಟಲಕ್ಷ್ಮಿ ಕಾಳೇಗೌಡ, ಜಿ.ಎಸ್.ನಾಗಮಣಿ, ಶಾಲಿನಿ ಮರೀಗೌಡ, ಸುನೀತಾ ಸರದಿ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಅಕ್ಕಿಗಿರಣಿ ಮಾಲೀಕರ ಸಂಘದ ಸದಸ್ಯರು ಹಾಗೂ ತಾಲ್ಲೂಕಿನ ಕಟ್ಟೆದೊಡ್ಡಿ ಮತ್ತು ಮಲ್ಲಯ್ಯನದೊಡ್ಡಿ ಗ್ರಾಮಸ್ಥರು ಧರಣಿಯಲ್ಲಿ ಭಾಗವಹಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದರು.ಗ್ರಾಮಸ್ಥರಾದ ಸಿದ್ದೇಗೌಡ, ಶಿವರಾಮು, ಮಹೇಶ್, ಎಂ.ಆರ್.ರವಿ, ಯೋಗಾನಂದ, ಬಂದೀಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಟ್ಟಿದ್ದನ್ನು ಖಂಡಿಸಿ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನಾ ಧರಣಿ 26ನೇ ದಿನವೂ ಹಾಗೂ ಸರದಿ ಉಪವಾಸ ಸತ್ಯಾಗ್ರಹ 6ನೇ ದಿನವೂ ಮುಂದುವರೆದಿದೆ.
ಸಮಿತಿ ಉಪಾಧ್ಯಕ್ಷ ಎಂ.ಎಸ್.ಆತ್ಮಾನಂದ, ಪ್ರಧಾನ ಕಾರ್ಯದರ್ಶಿ ಎನ್.ರಾಜು, ಖಜಾಂಚಿ ಡಾ. ಎಚ್.ಡಿ.ಚೌಡಯ್ಯ, ಜಿ.ಬಿ.ಶಿವಕುಮಾರ್, ಅಶೋಕ್ ಜಯರಾಮ್, ರವಿಕುಮಾರ್ ಗಣಿಗ, ಎಂ.ಎಸ್.ಚಿದಂಬರ್, ಶಂಭೂನಹಳ್ಳಿ ಸುರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.