ADVERTISEMENT

ಸಿದ್ದರಾಜು ಅಧ್ಯಕ್ಷ, ಚಂದ್ರಕಲಾ ಉಪಾಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 6:36 IST
Last Updated 18 ಸೆಪ್ಟೆಂಬರ್ 2013, 6:36 IST

ಮಂಡ್ಯ: ಇಲ್ಲಿನ ನಗರಸಭೆ ಅಧ್ಯಕ್ಷರಾಗಿ ಪಕ್ಷೇತರನಾಗಿ ಗೆದ್ದು, ಕಾಂಗ್ರೆಸ್‌್ ಸಹ ಸದಸ್ಯರಾಗಿರುವ ಬಿ. ಸಿದ್ದರಾಜು ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‌  ಸದಸ್ಯೆ ಎಂ.ಎಸ್‌.. ಚಂದ್ರಕಲಾ ಮಂಗಳವಾರ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್‌್ ಸಹ ಸದಸ್ಯ ಸಿದ್ದರಾಜು ಅವರಿಗೆ 27 ಮತಗಳು ಬಿದ್ದರೆ, ಪ್ರತಿಸ್ಪರ್ಧಿಗಳಾಗಿದ್ದ ಜೆಡಿಎಸ್‌ನ ಎಂ.ಜೆ. ಚಿಕ್ಕಣ್ಣ ಅವರಿಗೆ ಏಳು ಮತಗಳು ಲಭಿಸಿದರೆ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಹೊಸಹಳ್ಳಿ ಬೋರೇಗೌಡರಿಗೆ ಒಂದು ಮತ ಲಭಿಸಿದೆ.

ಸಾಮಾನ್ಯ ಮಹಿಳಾ ವರ್ಗರ್ಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಂದ್ರಕಲಾ ಅವರಿಗೆ 27 ಮತಗಳು ಬಿದ್ದರೆ, ಪ್ರತಿಸ್ಪರ್ಧಿ ಸುನೀತಾ ಅವರಿಗೆ 9 ಮತಗಳು ಬಿದ್ದಿವೆ. ಅಧ್ಯಕ್ಷ ಚುನಾವಣೆಯಲ್ಲಿ ಸೋತ ಹೊಸಹಳ್ಳಿ ಬೋರೇಗೌಡರು ಉಪಾಧ್ಯಕ್ಷ ಸ್ಥಾನದ ಚುನಾವಣೆ ಬಹಿಷ್ಕರಿಸಿ ಹೊರ ನಡೆಯುವ ಮೂಲಕ ಉಪಾಧ್ಯಕ್ಷ ಚುನಾವಣೆಯಲ್ಲಿ ಪಾಲ್ಗೊಳ್ಳಲಿಲ್ಲ

ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಸಚಿವ ಅಂಬರೀಷ್‌್ ಹಾಗೂ ಸಂಸದೆ ರಮ್ಯಾ ಸೇರಿ 37 ಮಂದಿ ಮತದಾನದ ಹಕ್ಕು ಹೊಂದಿದ್ದರು. 15 ಮಂದಿ ಕಾಂಗ್ರೆಸ್‌್್್, 10 ಮಂದಿ ಪಕ್ಷೇತರರು, 9 ಮಂದಿ ಜೆಡಿಎಸ್‌್್ ಹಾಗೂ ಒಬ್ಬರು ಬಿಜೆಪಿ ಸದಸ್ಯರಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಸಿದ್ದರಾಜು ಅವರಿಗೆ ಕಾಂಗ್ರೆಸ್ಸಿನ 14, ಪಕ್ಷೇತರರಾದ 10 ಹಾಗೂ ಬಿಜೆಪಿಯ ಒಬ್ಬರು ಸದಸ್ಯರು ಮತ ಚಲಾಯಿಸಿದ್ದಾರೆ.

ಕಾಂಗ್ರೆಸ್‌್ ಪಕ್ಷದಿಂದ ಬಿ.ಸಿದ್ದರಾಜು ಅಭ್ಯರ್ಥಿ ಎಂದು ನಿರ್ಧಿರಿಸಲಾಗಿತ್ತು. ಮೂರು ಬಾರಿ ಗೆದ್ದಿದ್ದ ಹೊಸಹಳ್ಳಿ ಬೋರೇಗೌಡ ಅವರು ತಮಗೆ ಅವಕಾಶ ನೀಡದ್ದನ್ನು ಪ್ರತಿಭಟಿಸಿ ಅಧ್ಯಕ್ಷ ಸ್ಥಾನಕ್ಕೆ ಕಣದಲ್ಲಿ ಉಳಿದರು. ಆದರೆ, ಅವರನ್ನು ಕಾಂಗ್ರೆಸ್ಸಿನ ಯಾವ ಸದಸ್ಯರೂ ಬೆಂಬಲಿಸಲಿಲ್ಲ.

ಕಣ್ಣೀರಿಟ್ಟ ಹೊಸಹಳ್ಳಿ ಬೋರೇಗೌಡ
ಹಣ ಇದ್ದವರಿಗೆ ಮಣೆ:  ಆರೋಪ ಹಣ ಇದ್ದವರಿಗೆ ನಗರಸಭೆ ಅಧ್ಯಕ್ಷ ಚುನಾವಣೆಯಲ್ಲಿ ಮಣೆ ಹಾಕಲಾಗಿದೆ ಎಂದು ನಗರಸಭೆಯಲ್ಲಿ ಕಾಂಗ್ರೆಸ್ಸಿನ ಹಿರಿಯ ಸದಸ್ಯ ಹೊಸಹಳ್ಳಿ ಬೋರೇಗೌಡ ಆರೋಪಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಚುನಾವಣೆಯಲ್ಲಿ ಸೋಲನುಭವಿಸಿ ಕಣ್ಣೀರಿಡುಡುತ್ತಲೇ ಹೊರ ಬಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಬಾರಿ ನಗರಸಭೆಗೆ ಸದಸ್ಯನಾಗಿದ್ದೆ. ಕಾಂಗ್ರೆಸ್ಸಿನಲ್ಲಿರುವ ಕೆಲವು ಕೆಟ್ಟವರಿಂದಾಗಿ ನನಗೆ ಅವಕಾಶ ನೀಡಲಿಲ್ಲ ಎಂದು ದೂರಿದರು.

ಕಾಂಗ್ರೆಸ್‌ ಮುಖಂಡರೊಬ್ಬರು ಅಧ್ಯಕ್ಷನನ್ನಾಗಿಸಲು 50 ಲಕ್ಷ ರೂಪಾಯಿ ಕೊಡುವಂತೆ ಕೇಳಿದರು. ನನ್ನ ಸಹೋದರ ಹಣ ತೆಗೆದುಕೊಂಡು ಹೋದರೂ, ಈಗಾಗಲೇ ಇನ್ನೊಬ್ಬರು 70 ಲಕ್ಷ ರೂ ಖಚು್ ಮಾಡಿದ್ದಾರೆ. ಆದ್ದರಿಂದ ಸಾಧ್ಯವಿಲ್ಲ ಎಂದು ಮರಳಿ ಕಳುಹಿಸಿದರು ಎಂದು ಆರೋಪಿಸಿದರು.

ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ನಾಮಪತ್ರ ಹಿಂತೆಗೆದುಕೊಳ್ಳಲು 20 ಲಕ್ಷ ರೂಪಾಯಿ ಆಮಿಷ ಒಡ್ಡಲಾಯಿತು. ಆದರೆ, ನಾನು ಕಣದಿಂದ ಹಿಂದೆ ಸರಿಯಲಿಲ್ಲ. 8 ತಿಂಗಳು 8 ದಿನ ಅವಕಾಶ ನೀಡುವಂತೆ ಕೇಳಿದರೂ ಅವಕಾಶ ನೀಡಲಿಲ್ಲ ಎಂದರು.

ಸಚಿವ ಅಂಬರೀಷ್‌್ ಅವರು ನೀನೇ ಅಧ್ಯಕ್ಷನಾಗುತ್ತೀಯಾ ಎಂದು ಹೇಳಿದ್ದರು. ಅವರ ಸ್ಟಾರ್‌ ಕಟ್ಟುವ ಅಭಿಮಾನಿಯಾಗಿದ್ದೆ. ಪಕ್ಷದ ನಿಷ್ಠಾವಂತನಿಗೆ ಅನ್ಯಾಯವಾಗಿದ್ದು, ನಗರಸಭೆಯನ್ನು ಈಗ ನರಕಸಭೆಯನ್ನಾಗಿ ಮಾಡಲಾಗಿದೆ. ಆರು ತಿಂಗಳಲ್ಲಿ ಹೊಸ ಅಧ್ಯಕ್ಷರು ಜೈಲಿಗೆ ಹೋಗಲಿದ್ದಾರೆ ಎಂದು ಟೀಕಿಸಿದರು.

ರಿಯಲ್‌್ ಎಸ್ಟೇಟ್‌್, ಬಡ್ಡಿ ವ್ಯವಹಾರ ಮಾಡಿಲ್ಲ. ಹೀಗಾಗಿ ಅಷ್ಟು ಹಣ ಕೊಡಲು ಸಾಧ್ಯವಾಗಲಿಲ್ಲ. ನಾನು ಮುಂದೆಯೂ ಕಾಂಗ್ರೆಸ್ಸಿನಲ್ಲಿ ಇರುತ್ತೇನೆ. ಆಯ್ಕೆ ಮಾಡಿ ಕಳುಹಿಸಿದ ಜನರ ಸೇವೆ ಮಾಡುತ್ತೇನೆ. ಕೆಲ ನಕಲಿ ಕಾಂಗ್ರಸ್ಸಿಗರಿಂದಾಗಿ ಹೀಗಾಗಿದೆ ಎಂದು ಅಳಲು ತೋಡಿಕೊಂಡರು.

ಸುಳ್ಳು ಆರೋಪ: ಸಿದ್ದರಾಜು
ಸೋಲಿನ ಹತಾಶೆಯಿಂದಾಗಿ ಹೊಸಹಳ್ಳಿ ಬೋರೇಗೌಡರು ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದು ನಗರಸಭೆ ನೂತನ ಅಧ್ಯಕ್ಷ ಬಿ. ಸಿದ್ದರಾಜು ಹೇಳಿದರು.

ಸದಸ್ಯರಿಗೆ ಹಣ ಹಂಚಿಕೆ ಮಾಡಿದ ಆರೋಪ ಕುರಿತು ಕೇಳಿದ ಪ್ರಶ್ನೆಗೆ, ಯಾವುದೇ ಹಣವನ್ನು ನೀಡಿಲ್ಲ. ನಾನೂ ಕಾಂಗ್ರೆಸ್ಸಿನಲ್ಲಿಯೇ ಇದ್ದೇನೆ. ಪಕ್ಷ ಅವಕಾಶ ನೀಡಿದೆ ಎಂದರು.

ಯಾವುದೇ ಆರೋಪಗಳಿದ್ದರೂ, ಕಾನೂನು ಇದೆ. ದೂರು ನೀಡಲಿ. ಅದನ್ನು ಅಲ್ಲಿ ಎದರಿಸಲು ಸಿದ್ದನಿದ್ದೇನೆ. ನಗರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.