ADVERTISEMENT

ಸೂಟ್‌ಕೇಸ್‌ ಸಂಸ್ಕೃತಿ ಕುರಿತು ಮಾತನಾಡುವ ನೈತಿಕತೆ ಇಲ್ಲ

ಮಧು ಮಾದೇಗೌಡರ ವಿರುದ್ಧ ಶಾಸಕ ತಮ್ಮಣ್ಣ ತೀವ್ರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 12:45 IST
Last Updated 13 ಏಪ್ರಿಲ್ 2018, 12:45 IST

ಮದ್ದೂರು: ‘ಸೂಟ್‌ಕೇಸ್‌ ಸಂಸ್ಕೃತಿಯ ಬಗೆಗೆ ಮಾತನಾಡಲು ವಿಧಾನ ಪರಿಷತ್‌ ಮಾಜಿ ಸದಸ್ಯ ಮಧು ಜಿ.ಮಾದೇಗೌಡ ಅವರಿಗೆ ಯಾವುದೇ ನೈತಿಕತೆ ಇಲ್ಲ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಗುರುವಾರ ತೀವ್ರ ವಾಗ್ದಾಳಿ ಕರೆ ನೀಡಿದರು.

ತಾಲ್ಲೂಕಿನ ಸೋಮನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಮಾದನಾಯಕನಹಳ್ಳಿ ಗ್ರಾಮದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿ ಸುದ್ದಿಗಾರರೊಡನೆ ಮಾತನಾಡಿದರು.

‘ಈ ಮಾತನ್ನು ಹೇಳಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ. ಕಾರಣ, ಕಳೆದ ಲೋಕಸಭೆ, ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಸ್ವ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ಸೂಟ್‌ಕೇಸ್ ಪಡೆದವರು ಯಾರು? . ಇಂತವರಿಂದ ನಾವು ನೈತಿಕತೆಯ ಪಾಠ ಕಲಿಯಬೇಕಿಲ್ಲ’ ಎಂದು ಕಿಡಿ ಕಾರಿದರು.

ADVERTISEMENT

‘ಕಳೆದ ಐದು ವರ್ಷಗಳಿಂದ ಕೋಟ್ಯಂತರ ಅನುದಾನ ತಂದು ಕ್ಷೇತ್ರದ ಪ್ರಗತಿಗೆ ಶ್ರಮಿಸಿದ್ದೇನೆ. ಜನರ ಮನಸ್ಸಿನಲ್ಲಿ ನನ್ನ ಕೆಲಸಗಳು ಉಳಿದಿದ್ದು, ನನ್ನನ್ನು ಮತ್ತೊಮ್ಮೆ ಶಾಸಕರನ್ನಾಗಿ ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ನನ್ನದಾಗಿದೆ’ ಎಂದರು.

‘ಹಳೇ ಮೈಸೂರು ಪ್ರಾಂತದಲ್ಲಿ ಜೆಡಿಎಸ್ 30ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ರಾಜ್ಯದಲ್ಲಿ 125ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಎಚ್‌.ಡಿ. ಕುಮಾರಸ್ವಾಮಿ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜಿಲ್ಲಾ ಪಂಚಾಯತಿ ಸದಸ್ಯ ಬೋರಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ಸತೀಶ್, ತಾಲ್ಲೂಕು ಯುವ ಅಧ್ಯಕ್ಷ ಸಿ.ಟಿ.ಶಂಕರ್, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಬ್ಯಾಡರಹಳ್ಳಿ ಶಿವಕುಮಾರ್, ಕೆಸ್ತೂರು ರವಿ, ಎನ್.ಆರ್.ಪ್ರಕಾಶ್, ಪ್ರೀತಂ, ಕುದರಗುಂಡಿ ಉಮೇಶ್, ಪುಟ್ಟರಾಜು, ಎಂ. ರವಿ, ಮಲ್ಲಣ್ಣ, ತೈಲೂರು ಸುನೀಲ್, ಬೊಮ್ಮಯ್ಯ, ಮಲ್ಲಯ್ಯ, ದಿವಾಕರ್, ಗುಂಡ ಮಹೇಶ್ ಸೇರಿ ಹಲವರು ಭಾಗವಹಿಸಿದ್ದರು.

ಸೋಮನಹಳ್ಳಿ, ಕೆ.ಕೋಡಿಹಳ್ಳಿ, ಅಗರಲಿಂಗನ ದೊಡ್ಡಿ, ಹುಣಸೆ ಮರದದೊಡ್ಡಿ, ರುದ್ರಾಕ್ಷಿಪುರ, ನಿಡಘಟ್ಟ, ಹೊಟ್ಟೇಗೌಡನದೊಡ್ಡಿ, ಕೆ.ಬಿ. ದೊಡ್ಡಿ, ಎಂ.ಪಿ.ದೊಡ್ಡಿ, ತಿಪ್ಪೂರು, ಮಾದನಾಯಕನಹಳ್ಳಿ, ತೈಲೂರು, ಬೂದಗುಪ್ಪೆ, ಆಲೂರು, ಡಿ.ಹೊಸೂರು, ಬ್ಯಾಡರಹಳ್ಳಿ ಸೇರಿ ವಿವಿಧೆಡೆ ಪ್ರಚಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.