ಶ್ರೀರಂಗಪಟ್ಟಣ: ಪಟ್ಟಣ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ (ಸೆಸ್ಕ್)ದ ಸಿಬ್ಬಂದಿಯ ವಸತಿ ಗೃಹದಲ್ಲಿ ಕಳೆದ ಎರಡು ತಿಂಗಳುಗಳಿಂದ ಕುಡಿಯುವ ನೀರಿಲ್ಲದೆ ಬಿಂದಿಗೆ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದ ಬೆಂಗಳೂರು- ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ಬಡಾವಣೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ ಎಂದು ಸೆಸ್ಕ್ ಜೂನಿಯರ್ ಎಂಜಿನಿಯರ್ ಸುರೇಂದ್ರ ಮೋಹನ್ ಹೇಳುತ್ತಾರೆ. ಮಹಿಳೆಯರು, ಮಕ್ಕಳು ಪರ್ಲಾಂಗು ದೂರದ ಬೀದಿ ನಲ್ಲಿಯಿಂದ ಮತ್ತು ಬೋರ್ವೆಲ್ಗಳಿಂದ ನೀರು ಹೊತ್ತು ತರಬೇಕಾಗಿದೆ. ಬೋರ್ವೆಲ್ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ಹಣ ಕೊಟ್ಟು ನೀರಿನ ಕ್ಯಾನ್ ಖರೀದಿಸುತ್ತಿದ್ದೇವೆ ಎಂದು ಅವರು ಸಮಸ್ಯೆ ಹೇಳಿಕೊಂಡರು.
ನೀರು ಸರಬರಾಜು ನಿಂತು ಹೋಗಿರುವ ಕುರಿತು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿ ಹಾಗೂ ವಾರ್ಡ್ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ನಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಸೆಸ್ಕ್ ಬಡಾವಣೆಯ ಗೌರಮ್ಮ, ರತ್ನಮ್ಮ ಇತರರು ಹೇಳುತ್ತಾರೆ.
ಪಟ್ಟಣದ ಕಾವೇರಿಪುರ ಬಡಾವಣೆಯಲ್ಲಿ ಕೂಡ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ ಎಂದು ಲೋಕೇಶ್ ದೂರಿದ್ದಾರೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದೂರಿಗೆ ಸ್ಪಂದಿಸುತ್ತಿಲ್ಲ. ಇದೇ ಧೋರಣೆ ಮುಂದುವರಿದರೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.