ADVERTISEMENT

ಹೊಸಬೀದಿಯ ಬಾವಿಗೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 5:23 IST
Last Updated 25 ಏಪ್ರಿಲ್ 2013, 5:23 IST

ಕಿಕ್ಕೇರಿ: ತ್ಯಾಜ್ಯ ವಸ್ತುಗಳಿಂದ ತುಂಬಿ ನಿಷ್ಪ್ರಯೋಜಕವಾಗಿದ್ದ ಹೊಸಬೀದಿಯ ತೆರೆದ ಬಾವಿಯನ್ನು ಬಡಾವಣೆಯ ನಿವಾಸಿಗಳು ಶುಚಿಗೊಳಿಸಿದರು.
ಈಚೆಗೆ ಬೇಸಿಗೆಯ ಬಿಸಿಲಿನಿಂದ ಕೊಳವೆ ಬಾವಿ ಬತ್ತಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿತ್ತು. ಆದರೆ ತ್ಯಾಜ್ಯಗಳಿಂದ ತುಂಬಿದ್ದ ಬಾವಿಯ ನೀರನ್ನು ಉಪಯೋಗಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಡಾವಣೆಯ ನಿವಾಸಿಗಳು ಬಾವಿಯ ಶುಚಿತ್ವಕ್ಕೆ ಮುಂದಾದರು.

ಮನೆಯಲ್ಲಿ ಮೂಲೆಗೆ ಸೇರಿದ್ದ ಹಗ್ಗ, ರಾಟೆಯನ್ನು ಹೊರತೆಗೆದರು. ಮರಿಯನಹೊಸೂರಿನ ರಾಜೇಶ ಅವರನ್ನು ಕರೆಯಿಸಿ ಬಾವಿಗೆ ಇಳಿಸಿದರು. ಬಾವಿಯಲ್ಲಿದ್ದ ಚಪ್ಪಲಿ, ಮರ, ಕಸ, ಪ್ಲಾಸ್ವಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳನ್ನು ಹೊರಹಾಕಿದರು.

`ಈಗ ಬಾವಿ ಶುಚಿಗೊಂಡಿದೆ. ಮಳೆಯ ನೀರನ್ನು ಹರಿದು ಹೋಗದಂತೆ ತಡೆಗಟ್ಟಿ ಬಾವಿಗೆ ಇಳಿಸಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗಿ ನೀರಿನ ಕ್ಷಾಮಕ್ಕೆ ಪರಿಹಾರ ದೊರೆಯುತ್ತದೆ' ಎಂದು ಕೆಲವರು ಸಲಹೆ ನೀಡಿದರು. 

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೇಶ್, ಸ್ವಾಮಿ, ವೇಲಾಪುರಿಶೆಟ್ಟಿ, ಹನುಮಂತಶೆಟ್ಟಿ, ದೊಡ್ಡಯ್ಯಶೆಟ್ಟಿ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.