ADVERTISEMENT

‘ಕಾಂಗ್ರೆಸ್‌ ಮೈತ್ರಿಗೆ ರೈತಸಂಘ ಒಲವು’

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 6:56 IST
Last Updated 1 ಜನವರಿ 2014, 6:56 IST

ಶ್ರೀರಂಗಪಟ್ಟಣ: ಪಿಎಸ್‌ಎಸ್‌ಕೆ ಕಾರ್ಖಾನೆ ಆಡಳಿತ ಮಂಡಳಿಗೆ ಮುಂಬರುವ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ರೈತ ಸಂಘ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಿದೆ. ಕೆಲವು ಕಾಂಗ್ರೆಸ್‌ ಮುಖಂಡರು ಈ ಮೈತ್ರಿಗೆ ಒಲವು ವ್ಯಕ್ತಪಡಿಸಿದ್ದಾರೆ. ಕಾರ್ಖಾನೆಯ ಹಿತದೃಷ್ಟಿಯಿಂದ ಮೈತ್ರಿ ಅನಿವಾರ್ಯ ಎಂದು ರೈತ ಮುಖಂಡ ಕೆ.ಎಸ್‌. ನಂಜುಂಡೇಗೌಡ ಅಭಿಪ್ರಾಯಪಟ್ಟರು.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ ನಡೆಯುವ ಸಂಭಾವ್ಯ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ರೈತಸಂಘ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಸುಸ್ಥಿತಿಗೆ ತರಲು ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ರೈತ ನಾಯಕ ಕೆ.ಎಸ್‌. ಪುಟ್ಟಣ್ಣಯ್ಯ ಒತ್ತಾಯಿಸಿದರು. ಈ ಭಾಗದ ಜೀವನಾಡಿಯಾದ ಕಾರ್ಖಾನೆ ದುಸ್ಥಿತಿಯಲ್ಲಿದೆ. ಸಕ್ಕರೆ ಉತ್ಪಾದನೆ ಜತೆಗೆ ಉಪ ಉತ್ಪನ್ನಗಳ ಘಟಕ ಸ್ಥಾಪನೆಯಾದರೆ ಕಾರ್ಖಾನೆ ಸುಧಾರಿಸಿಕೊಳ್ಳಲಿದೆ. ಕಾರ್ಖಾನೆ ಮತ್ತೆ ಚೇತರಿಸಿಕೊಳ್ಳಬೇಕಾದರೆ ಸರ್ಕಾರ ಅಗತ್ಯ ಆರ್ಥಿಕ ನೆರವು ನೀಡಬೇಕು. ಈ ಕಾರಣದಿಂದ ಕಾಂಗ್ರೆಸ್‌ ಮತ್ತು ರೈತ ಸಂಘದ ಮುಖಂಡರ ನಿಯೋಗ ಮುಖ್ಯಮಂತ್ರಿಗಳನ್ನು ಶೀಘ್ರ ಭೇಟಿ ಮಾಡಲಿದೆ ಎಂದು ಹೇಳಿದರು.

  ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌.ಲಿಂಗರಾಜು ಮಾತನಾಡಿದರು. ಪಿಎಸ್‌ಎಸ್‌ಕೆ ಮಾಜಿ ಉಪಾಧ್ಯಕ್ಷ ಪಿ.ಧನಂಜಯ, ಎಲ್‌.ಡಿ.ರವಿ, ರಾಮಕೃಷ್ಣ, ಪಾಲಹಳ್ಳಿ ದೇವರಾಜು, ರತ ಸಂಘದ ತಾಲ್ಲೂಕು ಕೆಂಪೇಗೌಡ, ಕುಬೇರಪ್ಪ, ಪಾರ್ವತಮ್ಮ, ಬಿ.ಎಸ್‌.ರಮೇಶ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.