ADVERTISEMENT

‘ಮಕ್ಕಳಿಗೆ ಸಂಸ್ಕಾರ ನೀಡಿ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 6:13 IST
Last Updated 14 ಮಾರ್ಚ್ 2014, 6:13 IST

ಮಳವಳ್ಳಿ: ಪೋಷಕರು ಮಕ್ಕಳಿಗೆ ಬಲವಂತದ ಶಿಕ್ಷಣ ಕೊಡಿಸದೇ ಸಂಸ್ಕಾರ, ವಿದ್ಯೆ ನೀಡಿ, ಮಾನವೀಯತೆ ಗುಣಗಳನ್ನು ಬೆಳೆಸಬೇಕು ಎಂದು ರಂಗಭೂಮಿ ಕಲಾವಿದ ಮಂಡ್ಯ ರಮೆಶ್ ಹೇಳಿದರು.

ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಗೋಕುಲ ವಿದ್ಯಾ ಸಂಸ್ಥೆ ಅವರಣದಲ್ಲಿ ಈಚೆಗೆ ನಡೆದ ಶಾಲೆಯ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜಕ್ಕೆ ಮಾದರಿಯಾಗಿ ಮಕ್ಕಳನ್ನು ಬೆಳಸುವಲ್ಲಿ ಪೋಷಕರ ಪಾತ್ರ ಅಪಾರವಾಗಿದ್ದು, ಇಂಗ್ಲಿಷ್ ವ್ಯಾಮೋಹಕ್ಕೆ ಬಲಿಯಾಗದೆ ವಾಸ್ತವತೆಯ ಗ್ರಾಮೀಣ ಬದುಕಿನ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸಿ ಎಂದು ಸಲಹೆ ನೀಡಿದರು.

ಕರ್ನಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳೆಲ್ಲರೂ ಗ್ರಾಮೀಣ ಪ್ರದೇಶದಲ್ಲೇ ಶಿಕ್ಷಣ ಪಡೆದವರಾಗಿದ್ದಾರೆ. ನಮ್ಮ ದೇಶದ ಸಂಸ್ಕೃತಿ-, ಕಲೆ, -ಶಿಕ್ಷಣಕ್ಕೆ ಅಪಾರ ಮೌಲ್ಯವಿದ್ದು, ಪೋಷಕರು ಬಣ್ಣದ ಪ್ರಪಂಚದ ವ್ಯಾಮೋಹಕ್ಕೆ ಒಳಗಾಗದೆ ನಮ್ಮ ದೇಶದ ಸಂಸ್ಕೃತಿಯ ಶಿಕ್ಷಣ ನೀಡಿ ಪ್ರಜ್ಞಾವಂತ ಪ್ರಜಗಳನ್ನು ರೂಪಿಸಬೇಕು ಎಂದು ತಿಳಿಸಿದರು.

ಗೋಕುಲ ವಿದ್ಯಾಸಂಸ್ಥೆ ಬೆಳೆದು ಬಂದ ದಾರಿ ಕುರಿತು ಕಿರು ಹೊತ್ತಿಗೆಯನ್ನು ಪ್ರಾಂಶುಪಾಲ ಹಾಗೂ ಹರಿಕಥಾ ವಿದ್ವಾನ್ ಬಿಳಿಕೆರೆ ಬಿ.ಎಸ್. ಗಂಗಾಧರ ಆಚಾರ್ ಬಿಡುಗಡೆಗೊಳಿಸಿ ಮಾತನಾಡಿದರು.

ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಮಂಡ್ಯ ರಮೇಶ್ ಬಹುಮಾನ ವಿತರಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ್, ಮುಖ್ಯ ಅತಿಥಿಗಳಾಗಿ ಎಎಸ್ಐ ಚಂದ್ರಶೇಖರ್, ಸಹ ಶಿಕ್ಷಕ ನಾಗರಾಜು, ಸಂಸ್ಥೆಯ ನಿರ್ದೇಶಕ ಜಗದೀಶ್, ಆಡಳಿತ ಮಂಡಳಿಯ ವ್ಯವಸ್ಥಾಪಕ ಲಂಕೇಶ್, ಪತ್ರಕರ್ತ ಮಾ.ಎಂ. ಶಿವಕುಮಾರ್, ಸಹ ಶಿಕ್ಷಕ ರವಿಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.