ನಾಗಮಂಗಲ: ಗ್ಯಾಸ್ ಸಿಲಿಂಡರ್ ಬದಲಿಸುವ ವೇಳೆ ಆಕಸ್ಮಿಕವಾಗಿ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದ್ದು ಏಳು ಮಂದಿ ಗುರುವಾರ ತಾಲ್ಲೂಕಿನ ಮೈಲಾರ ಪಟ್ಟಣ ಗ್ರಾಮದಲ್ಲಿ ಗಾಯಗೊಂಡಿದ್ದಾರೆ.
ಗ್ರಾಮದ ಲೇಟ್ ಕೃಷ್ಣಪ್ಪ ಅವರ ಪತ್ನಿ ಪುಟ್ಟಮ್ಮ ಅವರ ಮನೆಯಲ್ಲಿ ಗುರುವಾರ ಮಧ್ಯಾಹ್ನ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟದ ನಂತರ ತಕ್ಷಣವೇ ಬೆಂಕಿ ಇಡೀ ಮನೆಯನ್ನು ಆವರಿಸಿದೆ. ಮನೆಯಲ್ಲಿದ್ದ ಎಲ್ಲರೂ ಓಡಿ ಬಂದಿದ್ದು ಪ್ರಾಣ ಉಳಿಸಿಕೊಂಡಿದ್ದಾರೆ. ಪುಟ್ಟಮ್ಮ ಅವರ ಮಗಳಿಗೆ ಮನೆಯ ಕಿಟಕಿಯ ಗಾಜುಗಳು ಸಿಡಿದಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಸ್ಫೋಟಗೊಂಡ ಹಿನ್ನೆಲೆಯಲ್ಲಿ ಮನೆ ಗೋಡೆಗಳು ಸಂಪೂರ್ಣ ಬಿರುಕು ಬಿಟ್ಟಿದ್ದು, ಬಾಗಿಲು ಕಿಟಕಿಗಳು ಪುಡಿ ಪುಡಿಯಾಗಿವೆ.
ಅಲ್ಲದೇ ಗೋಡೆಯೊಂದು ಪಕ್ಕದ ಮನೆಯ ಗೋಡೆಯ ಮೇಲೆ ಬಿದ್ದಿದೆ. ಮನೆಯಲ್ಲಿದ್ದ ಚಿನ್ನಾಭರಣ, ಹಣ, ಕಾಗದ ಪತ್ರಗಳು, ಬಟ್ಟೆ ಬರೆ ಸೇರಿದಂತೆ ಆಹಾರ ಧಾನ್ಯಗಳು, ದಿನಬಳಕೆಯ ವಸ್ತುಗಳು, ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಸ್ಫೋಟದ ತೀವ್ರತೆಯಿಂದ ಮನೆಯ ಚಾವಣಿಯು ಹಾರಿ ಹೋಗಿದೆ. ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಬೆಂಕಿಯ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.