ADVERTISEMENT

ಇಂದಿನಿಂದ ಪರಿವರ್ತನಾ ಯಾತ್ರೆ ಶುರು

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 6:47 IST
Last Updated 19 ಜನವರಿ 2018, 6:47 IST
ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆ ಅಂಗವಾಗಿ ಮದ್ದೂರು ಪಟ್ಟಣದಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿರುವುದು
ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆ ಅಂಗವಾಗಿ ಮದ್ದೂರು ಪಟ್ಟಣದಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿರುವುದು   

ಮಂಡ್ಯ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆ ಶುಕ್ರವಾರ ಜಿಲ್ಲೆಗೆ ಬರುತ್ತಿದೆ. ಎರಡು ದಿನಗಳ ಕಾಲ ಸಂಚರಿಸಲಿದ್ದು, ಎಲ್ಲಾ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಲಿದೆ.

ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಮದ್ದೂರಿನ ಕೊಲ್ಲಿ ವೃತ್ತದಿಂದ ಶೋಭಾಯಾತ್ರೆ ನಡೆಯಲಿದೆ. ನಂತರ ಬಹಿರಂಗ ಸಭೆಯಲ್ಲಿ ಯಡಿಯೂರಪ್ಪ ಮಾತನಾಡುವರು. ಸಮಾವೇಶದಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.

ಕೇಂದ್ರ ಕಾನೂನು ಸಚಿವ ಸದಾ ನಂದಗೌಡ, ಮುಖಂಡರಾದ ಆರ್. ಅಶೋಕ್, ಸಿ.ಟಿ.ರವಿ, ಶೋಭಾ ಕರದ್ಲಾಂಜೆ, ಅಬ್ದುಲ್ ಅಜೀಂ, ತೇಜ ಸ್ವಿನಿ ರಮೇಶ್ ಗೌಡ ಭಾಗ ವಹಿಸು ವರು. ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ್‌ ಕುಮಾರ್‌ ನೇತೃತ್ವದಲ್ಲಿ ವೇದಿಕೆ ತಯಾರಿ, ಮೆರವಣಿಗೆಗೆ ಸಿದ್ಧತೆ ನಡೆದಿವೆ.

ADVERTISEMENT

ನಂತರ ಮಂಡ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. ನಂದಾ ವೃತ್ತದಿಂದ ಸಿಲ್ವರ್‌ ಜ್ಯೂಬಿಲಿ ಉದ್ಯಾನದವರೆಗೆ ಮೆರವಣಿಗೆ ಆಯೋಜಿಸಲಾಗಿದೆ. ನಂತರ ಪಾರ್ಕ್‌ನಲ್ಲಿ ಸಿದ್ಧಗೊಂಡಿರುವ ಬೃಹತ್‌ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ್‌, ಸಂಸದ ಪ್ರತಾಪ್‌ ಸಿಂಹ, ಮುಖಂಡರಾದ ಅರವಿಂದ್‌ ಲಿಂಬಾವಳಿ, ಅಶ್ವತ್ಥನಾರಾಯಣ್‌, ಸಿ.ಪಿ.ಯೋಗೀಶ್ವರ್‌, ಕೆ.ಎಸ್‌.ನಂಜುಂಡೇಗೌಡ ಭಾಗವಹಿಸುವರು. ನಗರ ಘಟಕದ ಅಧ್ಯಕ್ಷ ಎಚ್‌.ಆರ್‌.ಅರವಿಂದ್ ನೇತೃತ್ವದಲ್ಲಿ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ.

ಕಚೇರಿ ಉದ್ಘಾಟನೆ: ಸುಭಾಷ್‌ ನಗರದಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ಬಿಜೆಪಿ ಕಚೇರಿಯನ್ನು ಬಿ.ಎಸ್‌. ಯಡಿಯೂರಪ್ಪ ಉದ್ಘಾಟಿಸು ವರು. ನೂತನ ಕಚೇರಿಯಲ್ಲಿ ಕಾರ್ಯ ಕರ್ತರ ಜೊತೆ ಕೆಲಕಾಲ ಮಾತುಕತೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ನಾಗಮಂಗಲ ಪಟ್ಟಣದ ಸಾರಿಗೆ ಬಸ್‌ ನಿಲ್ದಾಣದ ಪಕ್ಕ ಎಸ್‌ಎಲ್‌ಎನ್‌ ಸಮು ದಾಯ ಭವನದಲ್ಲಿ ಪರಿವರ್ತನಾ ಯಾತ್ರೆ ನಡೆಯಲಿದೆ.

ಕೆ.ಆರ್‌.ಪೇಟೆ ಸಜ್ಜು:ಶುಕ್ರವಾರ ಸಂಜೆ 5ಕ್ಕೆ ಕೆ.ಆರ್‌.ಪೇಟೆ ಶ್ರೀರಂಗ ಟಾಕೀಸ್ ಆವರಣದಲ್ಲಿ ಸಮಾವೇಶ ವಿದೆ. ಯಡಿಯೂರಪ್ಪ ತವರು ತಾಲ್ಲೂಕಿನ ಬಿಜೆಪಿ ಮುಖಂಡರು ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆ ಇದೆ.

ಜ. 20ರಂದು ಬೆಳಿಗ್ಗೆ 10 ಗಂಟೆಗೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ಆರಂಭವಾಗಲಿದೆ. ಪಾಂಡವಪುರ ಪಟ್ಟಣದ ಹಳೇ ಬಸ್‌ ನಿಲ್ದಾಣದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ.

ನಂತರ ಶ್ರೀರಂಗಪಟ್ಟಣ ಖಾಸಗಿ ಬಸ್‌ ನಿಲ್ದಾಣದಲ್ಲಿ ಸಮಾವೇಶ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಮಳವಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ ಯಾತ್ರೆ ಚಾಮರಾಜನಗರ ಜಿಲ್ಲೆಗೆ ತೆರಳಲಿದೆ.

ಯಡಿಯೂರಪ್ಪ ಸ್ವಾಗತಿಸಲುಎಲ್ಲ ಸಿದ್ಧತೆ ಆಗಿದೆ. ಯಾತ್ರೆಯಿಂದ ಜಿಲ್ಲೆಯಲ್ಲಿ ಬಿಜೆಪಿ ಬಲಗೊಳ್ಳಲಿದೆ. ಸಾವಿರಾರು ಜನರು ಸೇರುವರು.
ಎಚ್‌.ಆರ್‌.ಅರವಿಂದ್‌ ಬಿಜೆಪಿ ಮಂಡ್ಯ ನಗರ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.