ಶ್ರೀರಂಗಪಟ್ಟಣ: ‘ಯಾರು ಎಷ್ಟೇ ಒತ್ತಡ ತಂದರೂ ಹಿಂದೆ ಸರಿಯದೆ 2018ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ’ ಎಂದು ಕೆಪಿಸಿಸಿ ಸದಸ್ಯ ಇಂಡುವಾಳು ಎಸ್.ಸಚ್ಚಿದಾನಂದ ಹೇಳಿದರು.
ತಾಲ್ಲೂಕಿನ ಕೆಆರ್ಎಸ್ನ ಪ್ರವಾಸಿ ಮಂದಿರ ಆವರಣದಲ್ಲಿ ಭಾನುವಾರ ನಡೆದ ತಮ್ಮ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು.
‘ಕೊತ್ತತ್ತಿ ಹೋಬಳಿ ಎರಡೂ ವೃತ್ತಗಳ ಜನರು ಜಾಗೃತ ಮತದಾರರ ವೇದಿಕೆ ರಚಿಸಿಕೊಂಡು ಸಂಘಟನೆಗೆ ಇಳಿದಿದ್ದಾರೆ. ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ರವೀಂದ್ರ ಶ್ರೀಕಂಠಯ್ಯ ಅವರಿಗೆ ಪರ್ಯಾಯ ನಾಯಕರನ್ನು ಚುನಾವಣೆಗೆ ಇಳಿಸುವ ಸಿದ್ಧತೆ ನಡೆಯುತ್ತಿದ್ದು, ನನ್ನನ್ನೂ ಸಂಪರ್ಕಿಸಿದ್ದಾರೆ’ ಎಂದು ಹೇಳಿದರು.
‘ಹತ್ತಾರು ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದೇನೆ. ಅದಕ್ಕಾಗಿ ಸಮಯ, ಹಣ ವ್ಯಯ ಮಾಡಿದ್ದೇನೆ. ಪಕ್ಷದ ವರಿಷ್ಠರಲ್ಲಿ ಬಿ–ಫಾರಂ ಕೊಡುವಂತೆ ಕೋರಿದ್ದೇನೆ. ಮತ್ತೊಂದೆಡೆ ಜೆಡಿಎಸ್ ಮತ್ತು ಬಿಜೆಪಿ ವರಿಷ್ಠರು ಕೂಡ ನನ್ನನ್ನು ಸಂಪರ್ಕಿಸಿದ್ದಾರೆ. ರಾಜಕೀಯ ಪಕ್ಷಗಳಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿಯೇ ಚುನಾವಣೆ ಎದುರಿಸುತ್ತೇನೆ’ ಎಂದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಮಣಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಪ್ರಕಾಶ್, ಸದಸ್ಯರಾದ ಮಂಜುನಾಥ್, ಕಲಾವತಿ, ಸುನಿತಾ ಜವರಪ್ಪ, ಮಾಜಿ ಸದಸ್ಯ ನಂಜುಂಡಯ್ಯ, ನಾಗರಾಜು, ಮಜ್ಜಿಗೆಪುರ ಶಿವರಾಂ, ಬೆಳಗೊಳ ಮಂಜುನಾಥ್, ಮೇಳಾಪುರ ಪುಟ್ಟರಾಜು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.