ADVERTISEMENT

ಪುರಾತನ ಕಟ್ಟೆಗೆ ಹೊಸ ರೂಪ

ಕೆರಗೋಡು ಸಮೀಪದ ಆಲಕೆರೆಯಲ್ಲಿ ಸ್ವಂತ ಹಣದಿಂದ ಹೂಳು ತೆಗೆಸಿದ ವ್ಯಾಪಾರಿ ಮಹೇಶ್

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 4:46 IST
Last Updated 16 ಸೆಪ್ಟೆಂಬರ್ 2020, 4:46 IST
ಕೆರಗೋಡು ಸಮೀಪದ ಆಲಕೆರೆ ಗ್ರಾಮದ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸ್ವಚ್ಛಗೊಂಡ ಪುರಾತನ ಕಟ್ಟೆ
ಕೆರಗೋಡು ಸಮೀಪದ ಆಲಕೆರೆ ಗ್ರಾಮದ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸ್ವಚ್ಛಗೊಂಡ ಪುರಾತನ ಕಟ್ಟೆ   

ಕೆರಗೋಡು: ಹೂಳು, ಕಸದಿಂದ ತುಂಬಿಹೋಗಿದ್ದ ಪುರಾತನ ಕಟ್ಟೆಯನ್ನು ಸ್ವಂತ ಹಣದಿಂದ ಯುವಕನೊಬ್ಬ ಸ್ನೇಹಿತರೊಂದಿಗೆ ಸೇರಿ ಸ್ವಚ್ಛಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಮಂಡ್ಯ ತಾಲ್ಲೂಕು ಆಲಕೆರೆ ಗ್ರಾಮದ ತರಕಾರಿ ವ್ಯಾಪಾರಿ ಮಹೇಶ್ ಎಂಬುವವರು, ಜ್ಞಾನ ಜ್ಯೋತಿ ಬಸವಣ್ಣ ಮಿತ್ರಕೂಟ ರಚಿಸಿಕೊಂಡು ಹಲವು ಸಾಮಾಜಿಕ ಕಾರ್ಯಕ್ರಗಳನ್ನು ಮಾಡುತ್ತಿದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿ ಜನ್ಮ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷ ರಕ್ತದಾನ ಶಿಬಿರ, ಅನ್ನದಾಸೋಹ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜನಮೆಚ್ಚುವ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.

ADVERTISEMENT

ನರೇಗಾ ಯೋಜನೆಯಲ್ಲಿ ಕಟ್ಟೆ ಹೂಳೆತ್ತಿಸುವ ₹3 ಲಕ್ಷದ ಕಾಮಗಾರಿಗೆ ಅನುಮೋದನೆ ಸಿಕ್ಕರೂ ತಾಂತ್ರಿಕ ಕಾರಣಗಳಿಂದ ಅನುದಾನ ಮಂಜೂರಾಗಲಿಲ್ಲ. ಆದರೂ ನಿರಾಶರಾಗದೆ ಮಹೇಶ್ ಅವರು ಕಟ್ಟೆ ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸಿದ್ದಾರೆ.

ಸಾರ್ವಜನಿಕರು ಸಂಚರಿಸಲು ಭಯಪಡುವಷ್ಟು ಗಿಡಗಳು ಬೆಳೆದು ತೀರಾ ಚಿಕ್ಕದಾಗಿ ಕಾಣುತ್ತಿದ್ದ ಕಟ್ಟೆ ಇದೀಗ ಸ್ವಚ್ಛಗೊಂಡು
ನೀರು ತುಂಬಿ ಕಂಗೊಳಿಸುತ್ತಿದೆ.

‘ಮಹದೇಶ್ವರ ದೇವಸ್ಥಾನದ ಆವರಣ, ಕಟ್ಟೆ, ಬನ್ನಿಮಂಟಪ, ಕಲ್ಯಾಣಿ, ಹಳೇ ಗುಡಿ ಸುತ್ತಲಿನ ಪ್ರದೇಶದಲ್ಲಿ ಗಲೀಜು ಮಾಡದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದೊಂದು ಪ್ರವಾಸಿ ಸ್ಥಳವನ್ನಾಗಿ ಮಾಡುವ ಆಲೋಚನೆ ಹೊಂದಿದ್ದೇವೆ’ ಎಂದು ಮಹೇಶ್ ಹೇಳುತ್ತಾರೆ.

‘ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಹೇಶ್ ಕೆಲಸ ಶ್ಲಾಘನೀಯ. ಸ್ವಂತ ಹಣದಿಂದ ಇಷ್ಟೆಲ್ಲಾ ಅಭಿವೃದ್ಧಿ ಮಾಡಿರುವುದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರು ಸಹಕಾರ ನೀಡಲಿದ್ದಾರೆ’ ಎಂದು ಮುಖಂಡ ರಾಜಣ್ಣ ‘ಪ್ರಜಾವಾಣಿ’ಗೆ
ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.