ADVERTISEMENT

ಸ್ಪಂದಿಸದ ಅಧಿಕಾರಿಗಳು: ಪ್ರಯಾಣಿಕರ ತಂಗುದಾಣ ನಿರ್ಮಿಸಿದ ಗ್ರಾಮಸ್ಥರು

ಸಚಿವ ತಮ್ಮಣ್ಣ ಕ್ಷೇತ್ರ: ಸ್ಪಂದಿಸದ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ

​ಪ್ರಜಾವಾಣಿ ವಾರ್ತೆ
Published 1 ಮೇ 2019, 10:58 IST
Last Updated 1 ಮೇ 2019, 10:58 IST
ಮದ್ದೂರು ತಾಲ್ಲೂಕಿನ ಯರಗನಹಳ್ಳಿಯಲ್ಲಿ ಗ್ರಾಮಸ್ಥರೇ ನಿರ್ಮಿಸಿರುವ ಬಸ್ ತಂಗುದಾಣ
ಮದ್ದೂರು ತಾಲ್ಲೂಕಿನ ಯರಗನಹಳ್ಳಿಯಲ್ಲಿ ಗ್ರಾಮಸ್ಥರೇ ನಿರ್ಮಿಸಿರುವ ಬಸ್ ತಂಗುದಾಣ   

ಮದ್ದೂರು: ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ (ಕೆಆರ್‌ಡಿಸಿಎಲ್‌) ಅಧಿಕಾರಿಗಳ ವರ್ತನೆಗೆ ಬೇಸತ್ತ, ತಾಲ್ಲೂಕಿನ ಯರಗನಹಳ್ಳಿ ಗ್ರಾಮಸ್ಥರು ಬಸ್‌ ನಿಲುಗಡೆ ಸ್ಥಳದಲ್ಲಿ ತಾವೇ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿಕೊಂಡಿದ್ದಾರೆ.

ಕೊರಟಗೆರೆ– ಕೊಳ್ಳೇಗಾಲ ಹೆದ್ದಾರಿಯಲ್ಲಿ ಬರುವ ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣ ಇರಲಿಲ್ಲ. ಯರಗನಹಳ್ಳಿ ಹಾಗೂ ಅಕ್ಕಪಕ್ಕದ ಗ್ರಾಮಗಳಾದ ಹನುಮಂತಪುರ, ಮಾರಸಿಂಗನಹಳ್ಳಿಯ ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಸೇರಿದಂತೆ ಬಸ್‌ಗಾಗಿ ಬಿಸಿಲು, ಮಳೆ ಎನ್ನದೆ ರಸ್ತೆಯಲ್ಲೇ ನಿಲ್ಲಬೇಕಿತ್ತು. ತಂಗುದಾಣ ನಿರ್ಮಿಸುವಂತೆ ಕೆಆರ್‌ಡಿಸಿಎಲ್‌ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಅಧಿಕಾರಿಗಳು ಸ್ಪಂದಿಸಿರಲಿಲ್ಲ.

ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಕಂಬ, ಮರ, ಸಿಮೆಂಟ್ ಶೀಟ್‌ಗಳನ್ನು ಹಾಕಿತಂಗುದಾಣವನ್ನು ನಿರ್ಮಿಸಿದ್ದಾರೆ. ಈ ಕಾರ್ಯದಲ್ಲಿ ಮಹಾಲಿಂಗು, ರಾಮ ಕೃಷ್ಣಯ್ಯ, ಶಿವರಾಜು, ಶಿವಮಾದಯ್ಯ, ಲಿಂಗರಾಜು, ಬೋರಯ್ಯ, ಹೊಂ ಬಾಳಯ್ಯ, ಶಿವರಾಮು, ಚಿಕ್ಕೋನು, ಕೋಡಿಲಿಂಗಯ್ಯ, ರಾಜು ಬಿ, ಪ್ರಕಾಶ್, ಕೃಷ್ಣ, ಆನಂದ್ ಕೈಜೋಡಿಸಿದ್ದಾರೆ.

ADVERTISEMENT

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಕ್ಷೇತ್ರದಲ್ಲಿಯೇ ತಂಗುದಾಣವಿಲ್ಲ. ಶಾಶ್ವತ ತಂಗುದಾಣ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.