ಪಾಂಡವಪುರ: ಬಿ.ವೈ.ನೀಲೇಗೌಡರು ಪಾಂಡವಪುರ ಕ್ಷೇತ್ರದ ಮೊದಲ ಶಾಸಕರಾಗಿ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಿ ರೈತರ ಜೀವನಾಡಿಯಾಗಿದ್ದರು ಎಂದು ಎಂಜಿನಿಯರ್ ರಾಜೀವ್ ಹೇಳಿದರು.
ತಾಲ್ಲೂಕಿನ ಹರವು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ನಡೆದ ಸಹಕಾರಿ ಧುರೀಣ, ಮಾಜಿ ಶಾಸಕ ಬಿ.ವೈ.ನೀಲೇಗೌಡರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನೀಲೇಗೌಡರು ಸಹಕಾರಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇಂದಿನ ಪೀಳಿಗೆಯವರು ಇಂತಹ ಮಹನೀಯರರನ್ನು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.
ಗ್ರಾಮರಂಗ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಬೇವಿನಕುಪ್ಪೆ ನಾಗಲಿಂಗೇಗೌಡ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸುವ ಮೂಲಕ ರೈತರು ಸದಾ ನೆನಪಿಸಿಕೊಳ್ಳುವಂತಹ ಕೆಲಸ ಮಾಡಿದರು. ಅದೇ ರೀತಿ ಬಿ.ವೈ.ನೀಲೇಗೌಡರು ಸಹಕಾರ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುವ ಜತೆಗೆ ಕಬ್ಬು ಬೆಳೆಯುವ ರೈತ ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಲಿ ಎಂದು ಪಿಎಸ್ಎಸ್ಕೆ ಸ್ಥಾಪಿಸಿದರು. ಇಂತಹ ಮಹಾನ್ ವ್ಯಕ್ತಿಗಳನ್ನು ಜನ ಎಂದೂ ಮರೆಯುವುದಿಲ್ಲ ಎಂದರು.
ಮುಖಂಡರಾದ ಎಚ್.ವಿ.ಗೋವಿಂದರಾಜು, ಎಚ್.ಕೆ.ವೆಂಕಟೇಶ್, ಎಚ್.ಸಿ.ಪುನೀತ್ ರಾಜ್, ಬಿ.ವಿ.ಕಿಶೋರ್, ಆರ್.ಮಧುಸೂದನ್, ರೇಣುಕಮ್ಮ, ಎಚ್.ವಿ.ನವೀನ್ ಕುಮಾರ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.