ADVERTISEMENT

ದೇವೇಗೌಡರನ್ನು ನಿಂದಿಸಿದರೆ, ಗೂಟದ ಕಾರು ಸಿಗುವ ಭ್ರಮೆ ಯೋಗೇಶ್ವರ್‌ಗೆ: ಪುಟ್ಟರಾಜು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 12:35 IST
Last Updated 27 ನವೆಂಬರ್ 2024, 12:35 IST
   

ಮಂಡ್ಯ: ‘ದೇವೇಗೌಡರ ಕುಟುಂಬವನ್ನು ನಿಂದಿಸಿದರೆ ಗೂಟದ ಕಾರು ಸಿಗುತ್ತದೆ ಅನ್ನುವ ಭ್ರಮೆಯಲ್ಲಿ ಸಿ.ಪಿ.ಯೋಗೇಶ್ವರ್‌ ಇದ್ದಾರೆ. ಜೆಡಿಎಸ್‌ ಅನ್ನು ಮುಗಿಸುವ ರೀತಿ ಮಾತನಾಡುವ ಯೋಗೇಶ್ವರ್‌ ಅವರೇ ಎಚ್ಚರಿಕೆ ಇರಲಿ. ನಿಮ್ಮ ನಡವಳಿಕೆ ಸರಿಪಡಿಸಿಕೊಳ್ಳದಿದ್ದರೆ, ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ನಿಮ್ಮ ಬಗ್ಗೆ ಮಾತನಾಡಿರುವ ರೆಕಾರ್ಡ್‌ ಇದೆ. ಅದನ್ನು ಹಾದಿ ಬೀದಿಯಲ್ಲಿ ಹೇಳಿ ಮಾನ ಹರಾಜು ಹಾಕುತ್ತೇವೆ’ ಎಂದು ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ತಿರುಗೇಟು ನೀಡಿದರು. 

‘ಗೆಲುವಿನ ಮದದಿಂದ ದೇವೇಗೌಡರನ್ನು ಮನೆಯಲ್ಲಿರಿ ಅನ್ನೋದು, ಕುಮಾರಣ್ಣ ಅವರನ್ನು ರಣಹೇಡಿ ಅನ್ನೋದು ಯೋಗೇಶ್ವರ್‌ ಅವರಿಗೆ ಶೋಭೆ ತರುವುದಿಲ್ಲ. ರಾಜಕಾರಣಕ್ಕೆ ದೇವೇಗೌಡರು ಬೀದಿಯಲ್ಲಿ ಓಡಾಡಲಿಲ್ಲ, ರೈತರ ಸಮಸ್ಯೆಗಳ ನಿವಾರಣೆಗಾಗಿ ಹೋರಾಟ ನಡೆಸಿದ್ದಾರೆ. ರೈತರು ಒಪ್ಪಿರುವುದಕ್ಕೆ ಗೌಡ್ರು ಇನ್ನೂ ಗೌಡರಾಗಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

‘ಯೋಗೇಶ್ವರ್‌ ಕೂಡ ಚುನಾವಣೆಯಲ್ಲಿ ಹಲವಾರು ಬಾರಿ ಸೋತಿದ್ದಾರೆ. ಈ ಬಾರಿ ಚುನಾವಣೆ ಇನ್ನೆರಡು ದಿನ ಇರುವಾಗಲೇ ರಣಹೇಡಿ ತರಹ ಯೋಗೇಶ್ವರ್‌ ಓಡಿ ಹೋದರು. ಈಗ ಗೆದ್ದಿರುವುದನ್ನು ಸ್ವಾಗತಿಸುತ್ತೇವೆ. ಚನ್ನಪಟ್ಟಣ ಮತದಾರರನ್ನು ಯೋಗೇಶ್ವರ್‌ ಗೌರವಿಸುವುದನ್ನು ಕಲಿಯಬೇಕು’ ಎಂದು ಕುಟುಕಿದರು. 

ADVERTISEMENT

ಎಚ್‌ಡಿಕೆಯಿಂದ ₹450 ಕೋಟಿ ಅನುದಾನ:

ರಾಮನಗರಕ್ಕೆ ನೀರು ಒದಗಿಸಲು ಮಳವಳ್ಳಿಯ ಸತ್ತೇಗಾಲದಿಂದ ಕಾವೇರಿ ನೀರು ತೆಗೆದುಕೊಂಡು ಬರಲು ಯೋಜನೆ ಮಾಡಿದ್ದು ಎಚ್‌.ಡಿ.ಕುಮಾರಸ್ವಾಮಿ. ಮುಖ್ಯಮಂತ್ರಿಯಾಗಿದ್ದಾಗ ರಾಮನಗರ ಜಿಲ್ಲೆಗೆ ಸುಮಾರು ₹450 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇಷ್ಟಿದ್ದರೂ ನೀನು ಅದ್ಯಾವುದೋ ಕೆಲವು ಕೆರೆಗಳಿಗೆ ನೀರು ಹರಿಸಿಬಿಟ್ಟು ಇಷ್ಟೊಂದು ಮಾತನಾಡುತ್ತೀಯಾ? ಎಂದು ಜರಿದರು.

ನಿನಗೆ ತಾಕತ್‌ ಇದ್ದರೆ ಒಬ್ಬ ಜೆಡಿಎಸ್‌ ಶಾಸಕನನ್ನ ಕರೆದುಕೊಂಡು ಹೋಗು. ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಎಲ್ಲವನ್ನೂ ಪಡೆದುಕೊಂಡೆ ಎಂದುಕೊಳ್ಳಬೇಡ. ಕಾಂಗ್ರೆಸ್‌ನಲ್ಲಿ ಘಟಸರ್ಪಗಳಿವೆ, ನಿನ್ನ ಮಾತನಾಡಲು ಬಿಡುವುದಿಲ್ಲ. ಸ್ವಲ್ಪ ಕಾದು ನೋಡು. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ, ನಿಮ್ಮದೇ ಪಕ್ಷದ ನೆಹರು ಕುಟುಂಬ, ಇಂದಿರಾಗಾಂಧಿ, ರಾಜೀವ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಂಡೂರು ಕ್ಷೇತ್ರದ ಅನ್ನಪೂರ್ಣ ಅವರ ಕುಟುಂಬ, ಅಷ್ಟೇ ಏಕೆ ನೀವು, ನಿಮ್ಮ ಸಹೋದರ, ನಿಮ್ಮ ಪತ್ನಿ ರಾಜಕೀಯದಲ್ಲಿಲ್ಲವೇ? ಎಂದು ಟೀಕಿಸಿದರು.

ನಿಖಿಲ್‌ ಅವರನ್ನು ಮಂಡ್ಯ ಜಿಲ್ಲೆಗೆ ಅನಿವಾರ್ಯವಾಗಿ ಲೋಕಸಭೆಗೆ ನಿಲ್ಲಿಸಿದ್ವಿ. ಜಿಲ್ಲೆಯೊಂದಿಗೆ ಅಂಬರೀಶ್‌ಗೆ ಅವಿನಾಭಾವ ಸಂಬಂಧವಿದ್ದ ಕಾರಣ ನಿಖಿಲ್‌ಗೆ ಸೋಲಾಯಿತು. ಜನಾಭಿಪ್ರಾಯದ ಮುಂದೆ ನಾವು ಯಾರೂ ಅಲ್ಲ ಎಂದರು. 

ಮಾಜಿ ಶಾಸಕ ಕೆ.ಅನ್ನದಾನಿ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.