ಭಾರತೀನಗರ: ಸಮೀಪದ ಚಿಕ್ಕರಸಿನಕೆರೆ ಗ್ರಾಮದ ಕಾಲಭೈರವೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.
ರಥೋತ್ಸವಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಚಾಲನೆ ನೀಡಿದರು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು
ಧನ್ಯತೆ ಮೆರೆದರು. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ರಥೋತ್ಸವ ಆರಂಭಗೊಂಡಿತು. ಗ್ರಾಮದ ರಥಬೀದಿಯಲ್ಲಿ ರಥ ಸಂಚರಿಸಿತು.
ರಥೋತ್ಸವಕ್ಕೂ ಮುನ್ನ ಕಾರ್ಕಹಳ್ಳಿ ಬಸವೇಶ್ವರ, ಬುಳ್ಳಕೆಂಪನದೊಡ್ಡಿ ನಿಶಾನಿ ಕಂಬ, ಮುಟ್ಟನಹಳ್ಳಿ ಏಳೂರಮ್ಮ, ಕಾಳಮ್ಮ, ಚಿಕ್ಕರಸಿನಕೆರೆ ಹೊನ್ನಾರತಿ ಪೂಜೆಗಳು, ಛತ್ರಿ– ಚಾಮರಗಳು, ನಂದಿ ಕಂಬಗಳು ರಥದ ಬಳಿಗೆ ಬಂದವು. ತುಸು ಹೊತ್ತು ರಥದ ಮುಂಭಾಗ ಹೆಬ್ಬಾರೆ, ತಮಟೆ, ನಗಾರಿ ಸದ್ದಿಗೆ ಕುಣಿತ ಹಾಕಿದವು. ನಂತರ ರಥೋತ್ಸವಕ್ಕೆ ಚಾಲನೆ ಸಿಕ್ಕಿತು.
ಡೊಳ್ಳುಕುಣಿತ, ಗಾರುಡಿ ಗೊಂಬೆಗಳ ಕುಣಿತ ರಥೋತ್ಸವಕ್ಕೆ ಮೆರುಗು ತಂದವು. ಜನಪದ ಕಲಾತಂಡಗಳು ರಥದ ಮುಂದೆ ಸಾಗುತ್ತಾ ಜನರನ್ನು ರಂಜಿಸಿದವು. ರಥವನ್ನು ವಿವಿಧ ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿತ್ತು. ರಥದ ಮಧ್ಯದಲ್ಲಿ ಕಾಲಭೈರವೇಶ್ವರ ಸ್ವಾಮಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿತ್ತು. ದೇವರ ವಿಗ್ರಹ ಹಾಗೂ ರಥವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.
ಭಕ್ತಾದಿಗಳು ಸಾಲುಗಟ್ಟಿ ನಿಂತು ರಥವನ್ನು ಎಳೆದು ಪುನೀತರಾದರು. ಕಾಲಭೈರವೇಶ್ವರ ಸ್ವಾಮಿ ಮೂರ್ತಿಗೆ ಹಣ್ಣು, ದವನ
ಎಸೆದು ಭಕ್ತಿ ಪ್ರದರ್ಶಿಸಿದರು.
ದೇವಾಲಯದ ಆವರಣದಲ್ಲಿ ಹಾಡು, ಭಜನೆ, ಕೋಲಾಟ, ನಾಟಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಭಕ್ತರು ದೇವರಿಗೆ ಪೂಜೆ, ಹರಕೆ ಸಲ್ಲಿಸಿದರು. ಬನ್ನಹಳ್ಳಿ ಹಾಗೂ ಅರೆಕಲ್ಲುದೊಡ್ಡಿ ಗ್ರಾಮಸ್ಥರು ಅನ್ನಸಂತರ್ಪಣೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.